ಬೆಂಗಳೂರು: ಗೆಲುವಿನ ಲಯಕ್ಕೆ ಮರಳುವ ವಿಶ್ವಾಸದಲ್ಲಿರುವ ಬೆಂಗಳೂರು ಫುಟ್ಬಾಲ್ ಕ್ಲಬ್ (ಬಿಎಫ್ಸಿ) ತಂಡವು ಶನಿವಾರ ಜಮ್ಶೆಡ್ಪುರ ಎಫ್ಸಿ (ಜೆಎಫ್ಸಿ) ತಂಡಕ್ಕೆ ಮುಖಾಮುಖಿಯಾಗಲಿದೆ.
ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಟೂರ್ನಿಯ ಈ ಪಂದ್ಯಕ್ಕೆ ಕಂಠೀರವ ಕ್ರೀಡಾಂಗಣ ಸಜ್ಜಾಗಿದೆ. ಇದುವರೆಗೆ ನಿರೀಕ್ಷಿತ ಸಾಮರ್ಥ್ಯ ತೋರುವಲ್ಲಿ ವಿಫಲವಾಗಿರುವ ಸುನಿಲ್ ಚೆಟ್ರಿ ನಾಯಕತ್ವದ ಬಿಎಫ್ಸಿ ಈ ಪಂದ್ಯದಲ್ಲಿ ಪುಟಿದೇಳುವ ಹಂಬಲದಲ್ಲಿದೆ. ತಂಡವು ಒಂಬತ್ತು ಪಂದ್ಯಗಳಿಂದ ಕೇವಲ ಏಳು ಪಾಯಿಂಟ್ಸ್ ಗಳಿಸಿ ಒಂಬತ್ತನೇ ಸ್ಥಾನದಲ್ಲಿದೆ.
ಜಮ್ಶೆಡ್ಪುರ ತಂಡವೂ ಒಂಬತ್ತು ಪಂದ್ಯಗಳನ್ನು ಆಡಿದ್ದು, ಕೇವಲ ನಾಲ್ಕು ಪಾಯಿಂಟ್ಸ್ನೊಂದಿಗೆ 10ನೇ ಸ್ಥಾನದಲ್ಲಿದೆ.
‘ಕೇರಳ ಎದುರಿನ ಪಂದ್ಯದಲ್ಲಿ ಉತ್ತಮ ಆಟವಾಡುವಲ್ಲಿ ನಮ್ಮ ತಂಡಕ್ಕೆ ಸಾಧ್ಯವಾಗಲಿಲ್ಲ. ಈ ಹಣಾಹಣಿಯಲ್ಲಿ ತಪ್ಪು ಸರಿಪಡಿಸಿಕೊಂಡು ಮುಂದುವರಿಯುವೆವು‘ ಎಂದು ಬಿಎಫ್ಸಿ ಕೋಚ್ ಸೈಮನ್ ಗ್ರೇಸನ್ ಹೇಳಿದ್ದಾರೆ.
ಭಾನುವಾರ ನಡೆದ ಪಂದ್ಯದಲ್ಲಿ ಕೇರಳ 3–2ರಿಂದ ಬಿಎಫ್ಸಿಗೆ ಸೋಲುಣಿಸಿತ್ತು. ಪ್ರಮುಖ ಆಟಗಾರರಾದ ಚೆಟ್ರಿ, ರಾಯ್ಕೃಷ್ಣ ಅವರ ಮೇಲೆ ಬಿಎಫ್ಸಿ ನಿರೀಕ್ಷೆ ಇಟ್ಟುಕೊಂಡಿದೆ. ತಂಡಕ್ಕೆ ಹೊಸದಾಗಿ ಸೇರ್ಪಡೆಯಾಗಿರುವ ಪ್ಯಾಬ್ಲೊ ಪೆರೆಜ್ ಅವರು, 11ರ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ.