ಹುಬ್ಬಳ್ಳಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಹುಬ್ಬಳ್ಳಿಗೆ ಗುರುವಾರ ಬಂದಿಳಿದ ವಿಮಾನದಲ್ಲಿ (ವಿಟಿ–ಎವಿಎಚ್) ಕಾಣಿಸಿಕೊಂಡ ತಾಂತ್ರಿಕ ದೋಷದ ಕುರಿತು ತಜ್ಞರ ತಂಡ ಶನಿವಾರ ಅಗತ್ಯ ಮಾಹಿತಿ ಸಂಗ್ರಹಿಸಿತು.
ನವದೆಹಲಿಯಿಂದ ಬಂದ ನಾಗರಿಕ ವಿಮಾನಯಾನ ನಿರ್ದೇಶನಾಲಯದ (ಡಿಜಿಸಿಎ) ಉಪನಿರ್ದೇಶಕ ಜೋಸೆಫ್ ನೇತೃತ್ವದ ತಂಡವು, ರನ್ವೇಯಲ್ಲಿ ವಿಮಾನವನ್ನು ನಾಲ್ಕೈದು ಬಾರಿ ಓಡಾಡಿಸಿತು. ಆ ಬಳಿಕ ಅದರ ಬ್ಲ್ಯಾಕ್ಬಾಕ್ಸ್ ಸೇರಿದಂತೆ ಇನ್ನಿತರ ತಾಂತ್ರಿಕ ಉಪಕರಣಗಳನ್ನು ವಶಕ್ಕೆ ಪಡೆದು, ದೆಹಲಿಗೆ ಮರಳಿತು.
ವಿಮಾನವು ಸದ್ಯ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲೇ ನಿಂತಿದೆ. ಬ್ಲ್ಯಾಕ್ಬಾಕ್ಸ್ನಲ್ಲಿ ದಾಖಲಾಗಿರುವ ತಾಂತ್ರಿಕ ಮಾಹಿತಿಯನ್ನು ಪರಿಶೀಲಿಸಿದ ನಂತರವೇ ವಿಮಾನ ಹಾರಾಟಕ್ಕೆ ಒಪ್ಪಿಗೆ ನೀಡುವ ಸಾಧ್ಯತೆ ಇದೆ ಎಂದು ಗೊತ್ತಾಗಿದೆ.