ಬೆಂಗಳೂರು: ಪಕ್ಷೇತರ ಅಭ್ಯರ್ಥಿ ರವಿಕೃಷ್ಣ ರೆಡ್ಡಿ ಆಧಾರರಹಿತ ದೂರು ನೀಡಿ ಅಧಿಕಾರಿಗಳ ಸಮಯ ಹಾಳು ಮಾಡಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು, ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣಾ ಕರ್ತವ್ಯಕ್ಕೆ ನೇಮಕಗೊಂಡಿರುವ ಫ್ಲೈಯಿಂಗ್ ಸ್ಕ್ವಾಡ್ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದಾರೆ.
‘ಮಾರೇನಹಳ್ಳಿ ಕೆರೆ ಪ್ರದೇಶದಲ್ಲಿ ಇದೇ 30ರಂದು ಮಧ್ಯಾಹ್ನ 3.15ರಿಂದ ರಾತ್ರಿ 10ರವರೆಗೆ ಸೀರೆ ವಿತರಿಸಲಾಗುತ್ತಿದೆ ಎಂದು ರೆಡ್ಡಿ ದೂರಿದ್ದರು. ಸ್ಥಳಕ್ಕೆ ಹೋಗಿ ನೋಡಿದಾಗ ಅಂತಹ ಯಾವುದೇ ಕಾರ್ಯಕ್ರಮ ನಡೆದಿರಲಿಲ್ಲ’ ಎಂದು ಫ್ಲೈಯಿಂಗ್ ಸ್ಕ್ವಾಡ್ನ ಮಹದೇವ ಗೌಡ ದೂರಿನಲ್ಲಿ ತಿಳಿಸಿದ್ದಾರೆ.
‘ಸೀರೆ ವಿತರಣೆಗೆ ಸಂಬಂಧಿಸಿದಂತೆ ಕೂಲಂಕಷ ವಿಚಾರಣೆ ನಡೆಸಿ, ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು‘ ಎಂದು ಅವರು ದೂರಿನಲ್ಲಿ ಹೇಳಿದ್ದಾರೆ.
ರವಿಕೃಷ್ಣ ರೆಡ್ಡಿ ಅವರು ಸೀರೆ ಹಂಚಿರುವುದಾಗಿ ಸುಳ್ಳು ಆರೋಪ ಹೊರಿಸಿ, ಜಾತಿ ನಿಂದನೆ ಮಾಡಿದ್ದಾರೆ ಎಂದ ಆರೋಪಿಸಿ, ಜಯನಗರ 5ನೇ ಹಂತದ ನಿವಾಸಿ ಕೆ.ಎಂ. ಶಾಂತಾ ಎಂಬುವವರು ಪೊಲೀಸರಿಗೆ ದೂರು ನೀಡಿದ್ದಾರೆ.