ಕೋಲ್ಕತ್ತ: ಜಾವಿ ಹೆರ್ನಾಂಡಿಜ್ ಮತ್ತು ರಾಯ್ ಕೃಷ್ಣ ಅವರ ಗೋಲುಗಳ ನೆರವಿನಿಂದ ಬೆಂಗಳೂರು ಎಫ್ಸಿ ತಂಡದವರು ಐಎಸ್ಎಲ್ ಫುಟ್ಬಾಲ್ ಟೂರ್ನಿಯಲ್ಲಿ ಸತತ ಐದನೇ ಗೆಲುವು ಪಡೆದರು.
ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಬಿಎಫ್ಸಿ 2–1 ಗೋಲುಗಳಿಂದ ಎಟಿಕೆ ಮೋಹನ್ ಬಾಗನ್ ತಂಡವನ್ನು ಮಣಿಸಿತು. ಕೋಲ್ಕತ್ತದ ತಂಡದ ವಿರುದ್ಧ ಬಿಎಫ್ಸಿಗೆ ದೊರೆತ ಮೊದಲ ಜಯ ಇದು.
ಜಾವಿ ಅವರು 77ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರೆ, ರಾಯ್ ಅವರು ಹೆಚ್ಚುವರಿ ಅವಧಿಯ ಮೊದಲ ನಿಮಿಷದಲ್ಲಿ (90+1ನೇ ನಿ.) ತಂಡದ ಎರಡನೇ ಗೋಲು ಗಳಿಸಿದರು.
ಇದಾದ ಎರಡು ನಿಮಿಷಗಳ ಬಳಿಕ ದಿಮಿತ್ರಿ ಪೆಟ್ರಟೊಸ್ (90+3ನೇ ನಿ.) ಅವರು ಮೋಹನ್ ಬಾಗನ್ಗೆ ಗೋಲು ತಂದಿತ್ತರು. ಆದರೆ ಒಂದು ಗೋಲಿನ ಮುನ್ನಡೆ ಕಾಪಾಡಿಕೊಂಡ ಬಿಎಫ್ಸಿ, ಸ್ಮರಣೀಯ ಗೆಲುವು ಒಲಿಸಿಕೊಂಡಿತು.
ಈ ಜಯದ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಆರನೇ ಸ್ಥಾನಕ್ಕೇರಿರುವ ಬೆಂಗಳೂರಿನ ತಂಡ ಪ್ಲೇ ಆಫ್ ಪ್ರವೇಶಿಸುವ ಸಾಧ್ಯತೆಯನ್ನು ಹೆಚ್ಚಿಸಿಕೊಂಡಿತು. ಒಟ್ಟು 25 ಪಾಯಿಂಟ್ಸ್ ಹೊಂದಿರುವ ತಂಡ, ಫೆ.11 ರಂದು ಬೆಂಗಳೂರಿನಲ್ಲಿ ನಡೆಯುವ ತನ್ನ ಮುಂದಿನ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ನ ಸವಾಲು ಎದುರಿಸಲಿದೆ.