ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಭಿನ್ನ ಕಲೆಯ ದೇಗುಲಗಳ ನಾಡು ಮೇದಕ

Last Updated 31 ಜನವರಿ 2018, 10:07 IST
ಅಕ್ಷರ ಗಾತ್ರ

ಸೇಡಂ: ತಾಲ್ಲೂಕಿನ ಗಡಿಭಾಗ ಹಾಗೂ ತೆಲಂಗಾಣಕ್ಕೆ ಕೇವಲ ಅರ್ಧ ಕಿಲೋ ಮೀಟರ್‌ನಷ್ಟೇ ಅಂತವಿರುವ ಮೇದಕ ಗ್ರಾಮ ಐತಿಹಾಸಿಕ ಸುಂದರ ದೇವಾಲಯಗಳಿಂದ ಪ್ರಸಿದ್ಧಿ ಪಡೆದಿದೆ.

‘ಇತಿಹಾಸದ ಪ್ರಕಾರ 12ನೇ ಶತಮಾನದ ಪೂರ್ವಾರ್ಧದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗಿರುವ ಸುಂದರ ಕುಸುರಿ ಕೆತ್ತನೆಯ ಚೆನ್ನಕೇಶ್ವರ ದೇವಾಲಯ ಹಾಗೂ ಭೂತನಾಥೇಶ್ವರ ದೇವಾಲಯ ಅತ್ಯಂತ ವಿಭಿನ್ನ ಮತ್ತು ವಿಶಿಷ್ಟ ಸಂಸ್ಕೃತಿಯನ್ನು ಒಳಗೊಂಡಿವೆ. ಈ ಭಾಗದಲ್ಲಿ ಅಳ್ವಿಕೆ ಮಾಡಿದ ರಾಜ ಮಹಾರಾಜರು ದೇವಾಲಯದ ನಿರ್ಮಾಣಕ್ಕೆ ಪ್ರಥಮ ಆದ್ಯತೆ ನೀಡಿ, ಧರ್ಮದ ಮೇಲೆ ಅಪಾರ ನಂಬಿಕೆಯನ್ನು ಹೊಂದಿದ್ದವರಾಗಿದ್ದರು ಎನ್ನುವುದಕ್ಕೆ ಶಿಲ್ಪಿಗಾರರ ಕೈಯಲ್ಲಿ ಅರಳಿದ ಭೂತನಾಥೇಶ್ವರ ಮತ್ತು ಚೆನ್ನಕೇಶವ ದೇವಾಲಯಗಳು ಉತ್ತಮ ನಿದರ್ಶನವಾಗಿ ನಿಲ್ಲುತ್ತವೆ.

ಭೂತನಾಥೇಶ್ವರ ದೇವಾಲಯವು ಅತ್ಯುತ್ತಮ ಶಿಲ್ಪಕಲೆಯ ಕೆತ್ತನೆಯನ್ನು ಹೊಂದಿದ್ದು, ಎರಡು ಗರ್ಭಗುಡಿಗಳನ್ನು ಹೊಂದಿದೆ. ಒಳಗಡೆ ನಂದಿ ಮಂಟಪ, ಆಕರ್ಷಣೀಯವಾಗಿ ಕೆತ್ತಲಾದ ಸ್ಥಂಭಗಳು ಗಮನ ಸೆಳೆಯುತ್ತವೆ. ಆರಂಭದಲ್ಲಿ ರಾಷ್ಟ್ರಕೂಟರ ಆಡಳಿತಕ್ಕೆ ಮತ್ತು ನಂತರ ಕಲ್ಯಾಣಿ ಚಾಲುಕ್ಯರ ಮನೆತನದ ರಾಜರು ಇಲ್ಲಿ ಆಳ್ವಿಕೆ ಮಾಡಿದ್ದರು ಎಂದು ಇತಿಹಾಸದಿಂದ ತಿಳಿದು ಬರುತ್ತದೆ.

ಮಹಾಭಾರತದ ದ್ರೌಪದಿ, ಭೀಮಾರ್ಜುನನ ಶಿಲ್ಪಗಳು, ಕೊಳಲು ಊದುತ್ತಾ ನಿಂತ ಕೃಷ್ಣನ ಲೀಲೆ, ಅವನನ್ನು ಅರಸುತ್ತ ಹೊರಟಿರುವ ಗೋಪಿಯರ ಶಿಲ್ಪಗಳು, ತುಂಬಾ ಸುಂದರವಾಗಿ ಮೂಡಿ ಬಂದಿವೆ. ರಾಮಾಯಣದ ಸೀತೆ, ರಾಮಲಕ್ಷ್ಮಣ ಸಹೋದರರ ಸಂಬಂಧ, ಶಿಲಾಬಾಲಕಿಯರ ನೃತ್ಯ, ಸೈನ್ಯದ ಪಡೆ, ಕುದುರೆ, ಆನೆ, ರಥದಳ, ಕಾಲ್ದಳ, ಬಿಲ್ಲು, ಬಾಣ, ಭರ್ಜಿ, ಕತ್ತಿಯ ಸೇರಿದಂತೆ ಅನೇಕ ಮೂರ್ತಿಗಳು ಶಿಲೆಯಲ್ಲಿ ಮನಮೋಹಕವಾಗಿ ಮತ್ತು ಭಾವನಾತ್ಮಕವಾಗಿ ಕಲಾಕರನ ಕೈಯಲ್ಲಿ ಅರಳಿದ್ದು, ನೋಡಲದ್ಭುತವಾಗಿವೆ.

‘ಶಿಲಾ ಬಾಲಕೀಯರ ಮೂರ್ತಿ ಕೆತ್ತನೆ, ವಿಭಿನ್ನ ಭಂಗಿಯಲ್ಲಿ ನಿಂತ ಕನ್ಯೆಯರ ಚಿತ್ರಗಳು ಸ್ಪಷ್ಟವಾಗಿ ಕಾಣಿಸುತ್ತವೆ. ಆಗಿನ ಕಾಲದಲ್ಲಿ ಧರಿಸುತ್ತಿದ್ದ ಒಡವೆಗಳು, ಆಭರಗಳು, ಉಡುವ ಬಟ್ಟೆ, ಕೇಶಾಲಂಕಾರ, ಸೇರಿದಂತೆ ಇನ್ನಿತರ ಸಾಂಸ್ಕೃತಿಕ ಇತಿಹಾಸ ಸಾರುವ ಮೂರ್ತಿಗಳು ಪ್ರತಿಯೊಂದು ಸಹ ಇತಿಹಾಸ ಸಾರುವಂತಿವೆ. ಚೆನ್ನಕೇಶವ ದೇವಾಲಯದ ಎತ್ತರವಾಗಿಯೂ ಮತ್ತು ಅತ್ಯಂತ ಆಕರ್ಷಕವಾಗಿಯೂ ನಿರ್ಮಿಸಲಾಗಿದೆ. ಇತಿಹಾಸ ಹೊಂದಿರುವ ದೇವಾಲಯಗಳು ಸರ್ಕಾರ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ದಿವ್ಯ ಆಡಳಿತದಿಂದ ನಿರ್ಲಕ್ಷಕ್ಕೆ ಒಳಗಾಗುತ್ತಿವೆ’ ಎನ್ನುವುದು ಈ ಭಾಗದ ಜನರ ಅಳಲು.

ಹಂಪಿ, ಐಹೊಳೆ, ಪಟ್ಟದಕಲ್ಲಿನಷ್ಟೆ ಈ ಭಾಗದಲ್ಲಿರುವ ಐತಿಹಾಸಿಕ ಸ್ಥಳಗಳತ್ತ ಸರ್ಕಾರ ಆಸಕ್ತಿ ತೋರಿ ಭೂ ಉತ್ಖನನ ಮಾಡಿದರೆ, ದಕ್ಷಿಣ ಕರ್ನಾಟಕಕ್ಕಿಂತ ಹೆಚ್ಚಿನ ಐತಿಹಾಸಿಕ ಸುಂದರ ಮತ್ತು ಇತಿಹಾಸ ಸಾರುವ ಮಹತ್ವ ಕುರುಹುಗಳು, ಶಾಸನಗಳು ಹಾಗೂ ಕನ್ನಡ ಭಾಷಾ ಪರಂಪರೆಗೆ ನೀಡಿದ ಉನ್ನತ ಕೊಡುಗೆಗಳು ಸಿಗುತ್ತವೆ.

ಈ ನಿಟ್ಟಿನಲ್ಲಿ ಸರ್ಕಾರ ಇರುವ ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಿ, ಐತಿಹಾಸಿಕ ಸಂಸ್ಕೃತಿಯನ್ನು ರಕ್ಷಿಸಬೇಕು. ಅಲ್ಲದೆ, ಭೂಮಿಯಲ್ಲಿ ಅಡಗಿರುವ ಅವಶೇಷಗಳನ್ನು ಪತ್ತೆಹಚ್ಚಬೇಕು’ ಎಂದು ಇತಿಹಾಸ ಸಂಶೋಧನೆಕಾರ ಶ್ರೀಶೈಲ್ ಬಿರಾದಾರ ಒತ್ತಾಯಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT