ಬೆಂಗಳೂರು: ‘ಸಂವಿಧಾನ ಎನ್ನುವುದು ಯಾವುದೇ ಪಕ್ಷದ ಸ್ವತ್ತಲ್ಲ. ಅದಕ್ಕೆ ಧಕ್ಕೆ ತರುವುದನ್ನು ಸಹಿಸಲಾಗದು’ ಎಂದು ಐಜಿಪಿ ಎಂ.ನಂಜುಂಡಸ್ವಾಮಿ ಅಭಿಪ್ರಾಯಪಟ್ಟರು.
ಡಾ.ಬಿ.ಆರ್.ಅಂಬೇಡ್ಕರ್ ಅವರ 127ನೇ ಜನ್ಮದಿನದ ಅಂಗವಾಗಿ ಬೆಂಗಳೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ಕಾಲೇಜು ಮತ್ತು
ಡಾ. ಮೋಹನ್ ಮಧುಮೇಹ ವಿಶೇಷ ಕೇಂದ್ರ ಜಂಟಿಯಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ನಾವೆಲ್ಲಾ ಭಾರತೀಯರು, ನಮ್ಮದು ಭಾರತ ಧರ್ಮ, ನಮ್ಮ ಗ್ರಂಥ ಸಂವಿಧಾನ’ ಎಂಬ ಪ್ರತಿಜ್ಞಾವಿಧಿಯನ್ನು ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಬೋಧಿಸಿದರು.
ಕುಲಸಚಿವ ಡಾ. ಸಿ. ಶಿವರಾಜು, ‘ರಾಜ್ಯದಲ್ಲಿ ಮಧುಮೇಹಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಮಧುಮೇಹಿಗಳು ನಿಯಮಿತ ಆಹಾರ ಹಾಗೂ ವ್ಯಾಯಾಮದ ಮೂಲಕ ಕಾಯಿಲೆಯನ್ನು ನಿಯಂತ್ರಣದಲ್ಲಿಡಬೇಕು’ ಎಂದು ಹೇಳಿದರು.
ವಿತ್ತಾಧಿಕಾರಿ ಡಾ. ಎ.ಲೋಕೇಶ್, ಪ್ರಾಂಶುಪಾಲ ಹಾಗೂ ಕಾರ್ಯಕ್ರಮ ಸಂಯೋಜಕ ಪ್ರೊ. ಪಿ.ಸಿ. ಕೃಷ್ಣಸ್ವಾಮಿ ಮಾತನಾಡಿದರು. ವಿಶ್ವವಿದ್ಯಾಲಯದ
350ಕ್ಕೂ ಹೆಚ್ಚು ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.