ನೆವೇಲಿ: ಕರ್ನಾಟಕ ತಂಡದವರು ಸಂತೋಷ್ ಟ್ರೋಫಿ ದಕ್ಷಿಣ ವಲಯ ಫುಟ್ಬಾಲ್ ಚಾಂಪಿಯನ್ಷಿಪ್ನ ಪಂದ್ಯದಲ್ಲಿ ಜಯಭೇರಿ ಮೊಳಗಿಸಿದ್ದಾರೆ.
ಮಂಗಳವಾರ ನಡೆದ ಹೋರಾಟದಲ್ಲಿ ಕರ್ನಾಟಕ 5–0 ಗೋಲುಗಳಿಂದ ಆಂಧ್ರಪ್ರದೇಶ ತಂಡವನ್ನು ಪರಾಭವಗೊಳಿಸಿತು. ಇದರೊಂದಿಗೆ ಗುಂಪಿನ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.
ಲಯನ್ ಅಗಸ್ಟೀನ್ ಮತ್ತು ಸುನಿಲ್ ಅವರು ಆರಂಭದಲ್ಲೇ ಕಾಲ್ಚಳಕ ತೋರಿ ತಂಡಕ್ಕೆ 2–0 ಮುನ್ನಡೆ ತಂದುಕೊಟ್ಟರು. ನಂತರ ಮನವೀರ್ ಸಿಂಗ್, ಸಫೀಲ್ ಮತ್ತು ನಿಖಿಲ್ ರಾಜ್ ಅವರು ಚೆಂಡನ್ನು ಗುರಿ ಮುಟ್ಟಿಸಿ ಸಂಭ್ರಮಿಸಿದರು.
ಶುಕ್ರವಾರ ನಡೆಯುವ ಪಂದ್ಯದಲ್ಲಿ ಕರ್ನಾಟಕ ತಂಡವು ತಮಿಳುನಾಡು ವಿರುದ್ಧ ಸೆಣಸಲಿದೆ.