ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಯುಮಾಲಿನ್ಯಕ್ಕೆ ಪಾಚಿ ಮದ್ದು?

Last Updated 31 ಜನವರಿ 2018, 19:30 IST
ಅಕ್ಷರ ಗಾತ್ರ

ಪಾಚಿ (ಹಾವಸೆ) ಯಾರಿಗೆ ಗೊತ್ತಿಲ್ಲ ಹೇಳಿ? ಇದೇ ಪಾಚಿಯಿಂದ ದೇಶದ ಮತ್ತು ರಾಜ್ಯದ ರಾಜಧಾನಿಗಳನ್ನು ಕಾಡುತ್ತಿರುವ ವಾಯು ಮಾಲಿನ್ಯ ನಿಯಂತ್ರಿಸಬಹುದು! ಅಂತಹದೊಂದು ತಂತ್ರಜ್ಞಾನವನ್ನು ನಗರದ ಇಬ್ಬರು ಯುವ ಎಂಜಿನಿಯರ್‌ಗಳು ಶೋಧಿಸಿದ್ದಾರೆ.

‘ಏರೋಪೋನಿಕ್ ವಿಧಾನದಲ್ಲಿ ಸಸ್ಯಗಳನ್ನು ಬೆಳೆಸುವ ಪ್ರಯೋಗ ನಡೆಸುತ್ತಿದ್ದೆವು. ಅದರಲ್ಲಿ ಕೆಲಸ ಮಾಡುವಾಗ ಇದೇ ತಂತ್ರಜ್ಞಾನದಲ್ಲಿ ನೈಸರ್ಗಿಕ ಪಾಚಿ (Moss–sphagnum) ಬಳಸಿ ವಾತಾವರಣದಲ್ಲಿರುವ ಕಾರ್ಬನ್ ಡೈಆಕ್ಸೈಡ್, ಸಲ್ಫರ್ ಡೈಆಕ್ಸೈಡ್, ನೈಟ್ರೋಜನ್, ಅತಿ ಸೂಕ್ಷ್ಮ ದೂಳಿನ ಕಣಗಳನ್ನು ಕಡಿಮೆ ಮಾಡುವ ಪ್ರಯೋಗ ನಡೆಸಲಾಯಿತು. ಇದರಲ್ಲಿ ಉತ್ತಮ ಫಲಿತಾಂಶವೂ ಸಿಕ್ಕಿದೆ’ ಎನ್ನುತ್ತಾರೆ ಅಮೆರಿಕದ ವರ್ಜೀನಿಯಾ ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಪದವೀಧರ 22ರ ಹರೆಯದ ಕೀರ್ತನ್ ಶಂಕರ್‌.

ಈ ಪ್ರಯೋಗದಲ್ಲಿ ಸಹಪಾಠಿ ಎಂ.ಇ.ಗಗನ್‌ಗೌಡ ಮತ್ತು ರಾಜೇಂದ್ರ ಅವರ ಪರಿಶ್ರಮವೂ ಇದೆ ಎನ್ನುತ್ತಾರೆ ಅವರು. ‘ಸಿಲಿಕಾನ್‌ ಸಿಟಿಯನ್ನು ಬಾಧಿಸುತ್ತಿರುವ ವಾಯುಮಾಲಿನ್ಯ ನಿಯಂತ್ರಿಸುವ ಜೊತೆಗೆ ನಗರದಲ್ಲಿ ಹೆಚ್ಚುತ್ತಿರುವ ತಾಪಮಾನವನ್ನು 5 ವರ್ಷದೊಳಗೆ ಕನಿಷ್ಠ 1.5ನಿಂದ 2 ಡಿಗ್ರಿ ಸೆಲ್ಸಿಯಸ್‌ನಷ್ಟು ತಗ್ಗಿಸುವ ಗುರಿ ನಮ್ಮದು. ಇದೇ ಉದ್ದೇಶದಿಂದ ಅಮೆರಿಕದಿಂದ ನಗರಕ್ಕೆ ವಾಪಸ್‌ ಬಂದಿದ್ದೇನೆ. ರಾಜ್ಯ ಸರ್ಕಾರ, ಬಿಬಿಎಂಪಿ, ಬಿಎಂಆರ್‌ಸಿಎಲ್, ಜಲಮಂಡಳಿ ಕೈಜೋಡಿಸಿದರೆ ‘ಮೊಸೆಸ್‌’ ತಂತ್ರಜ್ಞಾನವನ್ನು ಪರಿಣಾಮಕಾರಿ ಬಳಕೆಗೆ ತರಬಹುದು’ ಎಂದು ತಮ್ಮ ಕನಸು ತೆರೆದಿಟ್ಟಿದ್ದಾರೆ.

ರಾಜಧಾನಿಯಲ್ಲಿ ಸದ್ಯ 60 ಲಕ್ಷ ವಾಹನಗಳಿವೆ. ಇಷ್ಟು ವಾಹನಗಳು ಹೊರಬಿಡುವ ಕಾರ್ಬನ್ ಡೈಆಕ್ಸೈಡ್ ಜತೆಗೆ ಇತರೆ ವಾಹನಗಳು, ಕೈಗಾರಿಕೆಗಳು, ವಸತಿ, ಹೋಟೆಲ್ ಉದ್ಯಮಗಳಿಂದ ಉತ್ಪತ್ತಿಯಾಗುತ್ತಿರುವ ಕಾರ್ಬನ್ ಡೈಆಕ್ಸೈಡ್ ಲೆಕ್ಕಕ್ಕೆ ತೆಗೆದುಕೊಂಡಾಗ ಇದರ ಪ್ರಮಾಣ ದ್ವಿಗುಣವಾಗುತ್ತದೆ ಎನ್ನುತ್ತಾರೆ ಅವರು.

ನಗರದಲ್ಲಿ ಕಾರುಗಳು ಉಗುಳುವ ಕಾರ್ಬನ್ ಡೈಆಕ್ಸೈಡ್ ಹೀರಿಕೊಳ್ಳಲು ಕನಿಷ್ಠ 30 ಲಕ್ಷ ಮರಗಳು ಬೇಕಿದೆ. ಈಗ ಗಿಡಮರ ಬೆಳೆಸುವುದಕ್ಕಿಂತ ಅಭಿವೃದ್ಧಿ ಹೆಸರಿನಲ್ಲಿ ಗಿಡಮರ ಕಡಿಯುತ್ತಿರುವುದು ಹೆಚ್ಚಾಗುತ್ತಿದೆ. ಒಂದು ಗಿಡ ನೆಟ್ಟು ಬೆಳೆಸಿ, ಅದು ಮರವಾಗಬೇಕೆಂದರೆ 20ರಿಂದ 40 ವರ್ಷ ಬೇಕಾಗುತ್ತದೆ. ಗಿಡಮರ ಬೆಳೆಸಲು ಜಾಗ ಮೀಸಲಿಡದೆ ಇಡೀ ನಗರ ಕಾಂಕ್ರೀಟ್‌ ಕಾಡಾಗಿ ಪರಿವರ್ತಿಸಲಾಗುತ್ತಿದೆ. ವಾಯಮಾಲಿನ್ಯದಿಂದ ನಲುಗುತ್ತಿರುವ ಮಹಾನಗರಗಳಿಗೆ ಈ ಮಾದರಿಯ ತಂತ್ರಜ್ಞಾನದಿಂದ ತ್ವರಿತ ಪರಿಹಾರ ಸಿಗಲಿದೆ ಎಂದು ತಿಳಿಸುತ್ತಾರೆ.

240 ಮರಗಳು ಒಂದು ದಿನದಲ್ಲಿ ಎಷ್ಟು ಪ್ರಮಾಣದಲ್ಲಿ ಇಂಗಾಲದ ಡೈಆಕ್ಸೈಡ್, ಸಲ್ಫರ್ ಡೈಆಕ್ಸೈಡ್, ನೈಟ್ರೋಜನ್, ದೂಳಿನ ಕಣಗಳನ್ನು ಹೀರಿಕೊಳ್ಳಲಿವೆಯೋ ಅಷ್ಟೇ ಪ್ರಮಾಣದಲ್ಲಿ 3X3 ಚದರ ಮೀಟರ್ ಅಳತೆಯ ಪಾಚಿಯ ಫಲಕವೊಂದು ಹೀರಿಕೊಳ್ಳುತ್ತದೆ. ಮರಗಳು ವಾತಾವರಣದಿಂದ ಹೀರಿದ ಕಲ್ಮಶಗಳನ್ನು ಆಮ್ಲಜನಕವಾಗಿ ಪರಿವರ್ತಿಸುವಂತೆಯೇ ಪಾಚಿಯೂ ಮಾಡುತ್ತದೆ.

ವಾಯುಮಾಲಿನ್ಯದಿಂದ ಸಾಯುವವರ ಸಂಖ್ಯೆ ನಮ್ಮ ದೇಶದಲ್ಲೇ ಅತಿ ಹೆಚ್ಚು ಇದೆ. ಪ್ರತಿ ನಿಮಿಷಕ್ಕೆ ಇಬ್ಬರು ವಾಯು ಮಾಲಿನ್ಯದಿಂದ ಸಾವಿಗೀಡಾಗುತ್ತಿದ್ದಾರೆ. 2015ರಲ್ಲಿ 1.82 ಲಕ್ಷ ಜನರು ಸಾವನ್ನಪ್ಪಿದ್ದಾರೆ. ಪಾಚಿಯಿಂದ ವಾಯುಮಾಲಿನ್ಯ ನಿಯಂತ್ರಿಸುವ ತಂತ್ರಜ್ಞಾನ ಸದ್ಯ ಜರ್ಮನಿಯಲ್ಲಿ ಬಳಕೆಯಲ್ಲಿದೆ. ಜಪಾನ್‌ ಕೂಡ ಪಾಚಿ ಬಳಸಿ ನೀರಿನಲ್ಲಿರುವ ಸೀಸದ ಪ್ರಮಾಣ ತಗ್ಗಿಸುತ್ತಿದೆ ಎನ್ನುತ್ತಾರೆ ಅವರು.

ಸುಮಾರು ₹1ಲಕ್ಷ ವೆಚ್ಚದ ಈ ಪಾಚಿಯ ಫಲಕದಲ್ಲಿ 72 ಸೆನ್ಸರ್‌ ಇರುತ್ತವೆ. ಘಟಕದ ಸುತ್ತಲೂ ಇರುವ ಮಾಲಿನ್ಯ ಕಾರಕದ ಅಂಶದ ಪ್ರಮಾಣ ಮತ್ತು ತಾನು ವಾತಾವರಣದಿಂದ ಹೀರಿದ ಮಾಲಿನ್ಯಕಾರಕ ಅಂಶದ ಪ್ರಮಾಣವನ್ನು ಈ ಸೆನ್ಸರ್‌ಗಳು ದಾಖಲಿಸುತ್ತವೆ. ಈ ಘಟಕ ತನ್ನ ಸುತ್ತಲೂ 50 ಮೀಟರ್ ದೂರದಿಂದ ದೂಳಿನ ಕಣ, ಕಾರ್ಬನ್ ಆಕ್ಸೈಡ್, ಸಲ್ಫರ್‌‌ ಡೈಆಕ್ಸೈಡ್, ನೈಟ್ರೋಜನ್‌ ಡೈಆಕ್ಸೈಡ್‌ ಹೀರಿಕೊಳ್ಳಲಿದೆ.

ಒಮ್ಮೆ ಬೆಳೆಸಿದ ಪಾಚಿ 7 ತಿಂಗಳು ಜೀವಂತವಿರುತ್ತದೆ. ಹಳೆಯದನ್ನು ಕತ್ತರಿಸಿದರೆ, ಹೊಸತು ತಾನಾಗಿಯೇ ಹುಟ್ಟಿ ಫಲಕದ ತುಂಬ ಹರಡಿಕೊಳ್ಳುತ್ತದೆ. ಇದಕ್ಕೆ ನೀರು ಪೂರೈಕೆ ಇರಬೇಕು. ಸೌರ ವಿದ್ಯುತ್‌ನಿಂದಲೇ ಪಾಚಿಯ ಫಲಕದ ಸೆನ್ಸರ್‌ಗಳು ಕಾರ್ಯನಿರ್ವಹಿಸುತ್ತವೆ.

ಇವುಗಳನ್ನು ಮೆಟ್ರೊ ಪಿಲ್ಲರ್, ಬಸ್ ಬೇ, ಬಸ್ ತಂಗುದಾಣ, ಕಚೇರಿ ಆವರಣ, ಮನೆ, ಕಟ್ಟಡಗಳ ತಾರಸಿ ಅಳವಡಿಸಬಹುದು. ಪಾಚಿಯ ಫಲಕದಲ್ಲಿ ಅಳವಡಿಸಿದ ಫಿಲ್ಟರ್‌ ಕಾಗದದ ಹಾಳೆಯಲ್ಲಿ ಕಲ್ಮಶ ಸಂಗ್ರಹವಾಗುತ್ತದೆ. ತಿಂಗಳಿಗೊಮ್ಮೆ ಈ ಹಾಳೆ ಬದಲಿಸಿದರೆ ಸಾಕು, ನಿರ್ವಹಣೆಯೂ ಸುಲಭ.

ಹೇಗಿರಲಿದೆ ಈ ಯೂನಿಟ್‌ 
ಸುಮಾರು ₹1ಲಕ್ಷ ವೆಚ್ಚದ ಈ ಪಾಚಿಯ ಫಲಕದಲ್ಲಿ 72 ಸೆನ್ಸರ್‌ ಇರುತ್ತವೆ. ಘಟಕದ ಸುತ್ತಲೂ ಇರುವ ಮಾಲಿನ್ಯ ಕಾರಕದ ಅಂಶದ ಪ್ರಮಾಣ ಮತ್ತು ತಾನು ವಾತಾವರಣದಿಂದ ಹೀರಿದ ಮಾಲಿನ್ಯಕಾರಕ ಅಂಶದ ಪ್ರಮಾಣವನ್ನು ಈ ಸೆನ್ಸರ್‌ಗಳು ದಾಖಲಿಸುತ್ತವೆ. ಈ ಘಟಕ ತನ್ನ ಸುತ್ತಲೂ 50 ಮೀಟರ್ ದೂರದಿಂದ ದೂಳಿನ ಕಣ, ಕಾರ್ಬನ್ ಆಕ್ಸೈಡ್, ಸಲ್ಫರ್‌‌ ಡೈಆಕ್ಸೈಡ್, ನೈಟ್ರೋಜನ್‌ ಡೈಆಕ್ಸೈಡ್‌ ಹೀರಿಕೊಳ್ಳಲಿದೆ.

ಒಮ್ಮೆ ಬೆಳೆಸಿದ ಪಾಚಿ 7 ತಿಂಗಳು ಜೀವಂತವಿರುತ್ತದೆ. ಹಳೆಯದನ್ನು ಕತ್ತರಿಸಿದರೆ, ಹೊಸತು ತಾನಾಗಿಯೇ ಹುಟ್ಟಿ ಫಲಕದ ತುಂಬ ಹರಡಿಕೊಳ್ಳುತ್ತದೆ. ಇದಕ್ಕೆ ನೀರು ಪೂರೈಕೆ ಇರಬೇಕು. ಸೌರ ವಿದ್ಯುತ್‌ನಿಂದಲೇ ಪಾಚಿಯ ಫಲಕದ ಸೆನ್ಸರ್‌ಗಳು ಕಾರ್ಯನಿರ್ವಹಿಸುತ್ತವೆ.

ಇವುಗಳನ್ನು ಮೆಟ್ರೊ ಪಿಲ್ಲರ್, ಬಸ್ ಬೇ, ಬಸ್ ತಂಗುದಾಣ, ಕಚೇರಿ ಆವರಣ, ಮನೆ, ಕಟ್ಟಡಗಳ ತಾರಸಿ ಅಳವಡಿಸಬಹುದು. ಪಾಚಿಯ ಫಲಕದಲ್ಲಿ ಅಳವಡಿಸಿದ ಫಿಲ್ಟರ್‌ ಕಾಗದದ ಹಾಳೆಯಲ್ಲಿ ಕಲ್ಮಶ ಸಂಗ್ರಹವಾಗುತ್ತದೆ. ತಿಂಗಳಿಗೊಮ್ಮೆ ಈ ಹಾಳೆ ಬದಲಿಸಿದರೆ ಸಾಕು, ನಿರ್ವಹಣೆಯೂ ಸುಲಭ.

ಬಿಎಂಆರ್‌ಸಿಎಲ್‌ಗೆ ಪ್ರಸ್ತಾವ
ಈ ತಂತ್ರಜ್ಞಾನ ವಾಣಿಜ್ಯಿಕ ಬಳಕೆಗೆ ಮೀಸಲಾಗದೆ, ಇಂದಿನ ಬಹು ಗಂಭೀರ ಸಮಸ್ಯೆಗೆ ಪರಿಹಾರ ನೀಡಬೇಕೆನ್ನುವ ಆಸೆ ನಮ್ಮದು. ಇಂತಹ ‘ಮೊಸೆಸ್‌ ಯೂನಿಟ್’ ಅಳವಡಿಸಲು ಬಿಎಂಆರ್‌ಸಿಎಲ್‌ಗೆ ಪ್ರಸ್ತಾವ ಸಲ್ಲಿಸಲಾಗಿದೆ. ಬಹುರಾಷ್ಟ್ರೀಯ ಕಂಪನಿಗಳಿಗೂ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿಯಲ್ಲಿ ಇಂತಹ ಯೂನಿಟ್‌ ಅಳವಡಿಸುವಂತೆ ಕೋರಿಕೆ ಇಟ್ಟಿದ್ದೇವೆ. ಇನ್ಫೋಸಿಸ್, ಬಯೋಕಾನ್ ಕಂಪನಿಗಳಿಗೂ ಕೈಜೋಡಿಸುವಂತೆ ಮನವಿ ಮಾಡಲಿದ್ದೇವೆ ಎಂದು ಕೀರ್ತನ್‌ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT