ಬಳ್ಳಾರಿ: ನಗರದಲ್ಲಿ ಆಯೋಜಿಸಿರುವ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟ ವ್ಯವಸ್ಥಿತವಾಗಿಲ್ಲ ಎಂದು ಆರೋಪಿಸಿ, ಹಾವೇರಿ ಮತ್ತು ಚಿಕ್ಕಮಗಳೂರು ಜಿಲ್ಲೆಯ ನೌಕರರು ಶನಿವಾರ ಇಲ್ಲಿ ಅರೆಬೆತ್ತಲೆ ಪ್ರತಿಭಟನೆ ನಡೆಸಿದರು.
ಕಾರ್ಯಕ್ರಮ ಉದ್ಘಾಟನೆಗೂ ಮುನ್ನ ಜಿಲ್ಲಾ ಕ್ರೀಡಾಂಗಣದಲ್ಲಿ ಜಮಾ ಯಿಸಿದ ಪ್ರತಿಭಟನಾಕಾರರು, ‘ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಬರುವ ಶಿಕ್ಷಕರಿಗೆ ಪ್ರತಿ ವರ್ಷ ಟ್ರ್ಯಾಕ್ ಸೂಟ್ ನೀಡಲಾಗುತ್ತಿತ್ತು. ಆದರೆ ಈ ಬಾರಿ ಯಾರಿಗೂ ನೀಡಿಲ್ಲ’ ಎಂದು ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷರ ವಿರುದ್ಧ ವಾಗ್ದಾಳಿ ನಡೆಸಿದರು.
ಮಧ್ಯೆ ಪ್ರವೇಶಿಸಿದ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಿ.ಪಿ.ಮಂಜೇಗೌಡ, ಕೇಂದ್ರ ಕಚೇರಿಯಿಂದ ಎಂಟು ದಿನಗಳ ಒಳಗಾಗಿ ಟ್ರ್ಯಾಕ್ ಸೂಟ್ ವಿತರಿಸುವ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು. ಆ ಬಳಿಕ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಯಿತು.
ಕುಡಿವ ನೀರಿಗೂ ಪರದಾಟ
ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಬಂದಿದ್ದ ವಿವಿಧ ಜಿಲ್ಲೆಯ ಶಿಕ್ಷಕರು ಕುಡಿವ ನೀರಿಗೂ ತೊಂದರೆ ಪಡುವಂ ತಾಯಿತು. ನೀರಿನ ಕ್ಯಾನ್ಗಳನ್ನೇ ಎತ್ತಿ ನೀರು ಕುಡಿಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ನಗರದ ವಿವಿಧಡೆ ನೌಕರರಿಗೆ ವಸತಿ ವ್ಯವಸ್ಥೆ ಕಲ್ಪಿಸಿದ್ದು, ಅಲ್ಲಿ ಸರಿಯಾದ ಸೌಲಭ್ಯಗಳಿಲ್ಲ ಎಂದೂ ಶಿಕ್ಷಕರು ಆರೋಪಿಸಿದರು.
ವಾಲ್ಮೀಕಿ ಭವನದ ಬಳಿ ಉಪಾಹಾರ, ಊಟದ ವ್ಯವಸ್ಥೆ ಮಾಡಿದ್ದು, ಬೆಳಗಿನ ಉಪಾಹಾರಕ್ಕಾಗಿ ನೌಕರರ ನೂಕುನುಗ್ಗಲು ಕಂಡುಬಂತು. ಅಲ್ಲದೆ, ಶುಕ್ರವಾರ ರಾತ್ರಿ ನಗರಕ್ಕೆ ಬಂದಿಳಿದ ನೌಕರರಿಗೆ ಊಟದ ವ್ಯವಸ್ಥೆ ಮಾಡದಿರುವುದಕ್ಕೂ ಶಿಕ್ಷಕರು ಪ್ರತಿಭಟನೆ ನಡೆಸಿದರು.