ಮೆಲ್ಬೋರ್ನ್, ಮೇ 24– ಬಾಂಬ್ ದಾಳಿಯ ಪೂರ್ಣ ನಿಲುಗಡೆ ವಿಯಟ್ನಾಂ ಶಾಂತಿ ಸಾಧನೆಗೆ ಅತ್ಯಂತ ಅಗತ್ಯ ಎಂದು ಭಾರತದ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಇಂದು ಇಲ್ಲಿ ಹೇಳಿದರು.
ಉತ್ತರ ವಿಯಟ್ನಾಂ ಮೇಲೆ ಅಮೆರಿಕ ತನ್ನ ಬಾಂಬ್ ದಾಳಿಯನ್ನು ಬೇಷರತ್ತಾಗಿ ನಿಲ್ಲಿಸಬೇಕೆಂಬುದಕ್ಕೆ ಬೆಂಬಲ ನೀಡಬೇಕೆಂದು ಆಸ್ಟ್ರೇಲಿಯಾ ಸರ್ಕಾರಕ್ಕೆ ತಾವು ಒತ್ತಡ ತರಲಿಲ್ಲ ಎಂದು ಶ್ರೀಮತಿ ಗಾಂಧಿ ಹೇಳಿದರು.
**
‘ಬೆಳೆ ನಿಯಂತ್ರಣ’: ಕೃಷಿ ಆಯೋಗದಿಂದ ಪರಿಶೀಲನೆ
ನವದೆಹಲಿ, ಮೇ 24– ಭವಿಷ್ಯದ ಕೃಷಿ ತಂತ್ರದಲ್ಲಿ ‘ಬೆಳೆ ನಿಯಂತ್ರಣ’ ಅತಿ ಮುಖ್ಯವಾದ ಲಕ್ಷಣ. ಆಹಾರ ಸಚಿವ ಶಾಖೆ ಇದನ್ನು ರೂಪಿಸಿದೆ.
ಉದ್ದೇಶಿತ ಕೃಷಿ ಆಯೋಗ ಈ ಪ್ರಶ್ನೆಯನ್ನು ವಿವರವಾಗಿ ಪರಿಶೀಲಿಸುವುದೆಂದು ನಿರೀಕ್ಷಿಸಲಾಗಿದೆ.
ಆಹಾರ ಧಾನ್ಯಗಳ ಸ್ವಾವಲಂಬನೆಯೇ ಪ್ರಸ್ತುತ ಕೃಷಿ ತಂತ್ರದ ಗುರಿ. 1970–71ರ ಹೊತ್ತಿಗೆ ಒಮ್ಮೆ ಈ ಗುರಿಯನ್ನು ಸಾಧಿಸಿದ ನಂತರ ಕೃಷಿ ಅಭಿವೃದ್ಧಿಯ ಇಡೀ ಭವಿಷ್ಯ ಬದಲಾಗುತ್ತದೆ.
**
ಕೃಷಿ ಅಭಿವೃದ್ಧಿಗೆ ಅಣುಶಕ್ತಿ ಬಳಕೆ
ಸಿಡ್ನಿ, ಮೇ 24– ಹಿರೋಷಿಮಾದ ಮೇಲೆ ಪ್ರಥಮ ಅಣುಬಾಂಬ್ ಬೀಳುವುದಕ್ಕೆ ಮುಂಚಿನಿಂದಲೂ ಭಾರತ ಅಣು ವಿಜ್ಞಾನದ ಸಂಶೋಧನೆಯಲ್ಲಿ ತೊಡಗಿತ್ತು ಎಂದು ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರು ಇಂದು ಇಲ್ಲಿ ತಿಳಿಸಿದರು.
ನ್ಯೂ ಸೌತ್ ವೇಲ್ಸ್ ಸರ್ಕಾರ ಏರ್ಪಡಿಸಿದ್ದ ಔತಣ ಕೂಟದಲ್ಲಿ ಮಾತನಾಡುತ್ತ, ಭಾರತ ಆಸ್ಟ್ರೇಲಿಯದಂತೆ ಕೃಷಿಗೆ ಹೆಚ್ಚು ಪ್ರಾಮುಖ್ಯ ನೀಡುತ್ತಿದೆಯೆಂದು ತಿಳಿಸಿ, ಕೃಷಿ ಅಭಿವೃದ್ಧಿಗಾಗಿ ಅಣು ಉತ್ಪಾದನೆಗಳನ್ನು ಬಳಸುತ್ತಿದೆಯೆಂದು ನುಡಿದರು.