ಬೆಂಗಳೂರು: ಕರ್ನಾಟಕ ತಂಡದವರು ಬುಧವಾರದಿಂದ ನಡೆಯುವ ಬ್ಯಾಂಕ್ ಆಫ್ ಬರೋಡ ಆಶ್ರಯದ ಮುಲ್ಕಿ ಸುಂದರ್ ರಾಮ್ ಶೆಟ್ಟಿ ಅಖಿಲ ಭಾರತ ಆಹ್ವಾನಿತ ಬ್ಯಾಸ್ಕೆಟ್ಬಾಲ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ.
ಮಲ್ಲೇಶ್ವರದ ಬೀಗಲ್ಸ್ ಬ್ಯಾಸ್ಕೆಟ್ಬಾಲ್ ಕ್ಲಬ್ ಅಂಗಳದಲ್ಲಿ ಒಟ್ಟು ಐದು ದಿನಗಳ ಕಾಲ ಪಂದ್ಯಗಳು ನಡೆಯಲಿದ್ದು, ದೇಶದ ಬಲಿಷ್ಠ ತಂಡಗಳ ಆಟ ಕಣ್ತುಂಬಿಕೊಳ್ಳುವ ಅವಕಾಶ ಉದ್ಯಾನ ನಗರಿಯ ಬ್ಯಾಸ್ಕೆಟ್ಬಾಲ್ ಪ್ರಿಯರಿಗೆ ಸಿಗಲಿದೆ.
ಆತಿಥೇಯ ಬ್ಯಾಂಕ್ ಆಫ್ ಬರೋಡ, ಕರ್ನಾಟಕ, ಇನ್ಕಮ್ ಟ್ಯಾಕ್ಸ್ (ಗುಜರಾತ್), ಐಸಿಎಫ್ (ಚೆನ್ನೈ), ಕೆಎಸ್ಇಬಿ (ತಿರುವನಂತಪುರ), ಇಂಡಿಯನ್ ಬ್ಯಾಂಕ್ (ಚೆನ್ನೈ), ಇನ್ಕಮ್ ಟ್ಯಾಕ್ಸ್ (ಚೆನ್ನೈ), ಡಿಎಲ್ಡಬ್ಲ್ಯು (ವಾರಣಸಿ) ತಂಡಗಳು ಪರಸ್ಪರ ಮುಖಾಮುಖಿಯಾಗಲಿವೆ.
ಪ್ರತಿ ದಿನ ಸಂಜೆ 5 ಗಂಟೆಯಿಂದ ಪಂದ್ಯಗಳು ಆರಂಭವಾಗಲಿವೆ. ಮೊದಲ ದಿನ ಒಟ್ಟು ನಾಲ್ಕು ಲೀಗ್ ಪಂದ್ಯಗಳು ಜರುಗಲಿವೆ.
ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಭಾರತವನ್ನು ಪ್ರತಿನಿಧಿಸಿರುವ ಎ.ಅರವಿಂದ್, ಅನಿಲ್ ಕುಮಾರ್ ಮತ್ತು ರಾಜೇಶ್ ಉಪ್ಪಾರ ಅವರು ಬ್ಯಾಂಕ್ ಆಫ್ ಬರೋಡ ತಂಡದ ಬೆನ್ನೆಲುಬಾಗಿದ್ದಾರೆ.
ಕರ್ನಾಟಕ ತಂಡ ಇಂತಿದೆ: ಸೇತು, ಮನೋಜ್, ಅಕ್ಷನ್ ರಾವ್, ಗೌತಮ್, ಅರ್ಪಣ್, ಪ್ರಭು, ಅನಿಕೇತ್, ರಕ್ಷಿತ್, ನಿಖಿಲ್, ಅಕ್ಷಯ, ಸುಮಂತ್ ಮತ್ತು ಪ್ರಶಾಂತ್ ತೋಮರ್.