ಪುತ್ತೂರು: ಟೀಮ್ ಸ್ವಚ್ಛ ಪುತ್ತೂರು ತಂಡದ ಸದಸ್ಯರು ಭಾನುವಾರ ಪುತ್ತೂರು ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಪರಿಸರದಲ್ಲಿ ಸ್ವಚ್ಛತಾ ಅಭಿಯಾನ ನಡೆಸುವ ಮೂಲಕ ಪರಿಸರದ ಸಾರ್ವಜನಿಕರಲ್ಲಿ ಸ್ವಚ್ಛತಾ ಜಾಗೃತಿ ಮೂಡಿಸಿತು.
ಸ್ವಚ್ಛತಾ ಅಭಿಯಾನವನ್ನು ನಾಗರಿಕರಾದ ಉದಯ ಕುಮಾರ್ ಮತ್ತು ರಾಧಾಕೃಷ್ಣ ಭಟ್ ಅವರು ಧ್ವಜಾರೋಹಣ ಮಾಡುವ ಮೂಲಕ ಉದ್ಘಾಟಿಸಿದರು.
‘ಸಾರ್ವಜನಿಕರು ಕೇವಲ ಸ್ವಚ್ಛ ಮಾಡುವುದನ್ನು ನಿಂತು ನೋಡಿದರೆ ಸಾಲದು. ಪ್ರತಿಯೊಬ್ಬರೂ ಈ ಅಭಿಯಾನದಲ್ಲಿ ಪಾಲ್ಗೊಂಡು ಸ್ವಚ್ಛ ಪುತ್ತೂರಿನ ಕಲ್ಪನೆಯನ್ನು ಸಾಕಾರಗೊಳಿಸಬೇಕು ಎಂದು ಅವರು ಅಭಿಯಾನದಲ್ಲಿ ಹೇಳಿದರು.
ಜನರು ಪಾಲ್ಗೊಂಡು ಸ್ವಚ್ಛತೆ ಮಾಡಿದಲ್ಲಿ ಮಾತ್ರ ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ್ ಪರಿಕಲ್ಪನೆಗೆ ನಾವು ಕೈಜೋಡಿಸಲು ಸಾಧ್ಯವಾಗುತ್ತದೆ’ ಎಂದು ಅವರು ಹೇಳಿದರು.
ಬಸ್ ನಿಲ್ದಾಣ ಪರಿಸರದ ಹೊಟೇಲ್, ಅಂಗಡಿ, ತಂಪು ಪಾನೀಯ ಮಾರಾಟ ಕೇಂದ್ರಗಳಿಗೆ ಭೇಟಿ ನೀಡಿದ ಅಭಿಯಾನ ತಂಡವು ‘ ಮಾಲೀಕರು ಉಧ್ಯಮಗಳಲ್ಲಿ ಸ್ವಚ್ಛತೆಗೆ ಆಧ್ಯತೆ ನೀಡಬೇಕು. ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು.
ಕಸವನ್ನು ಪರಿಸರದಲ್ಲಿ ಎಸೆಯದಂತೆ ಜಾಗೃತಿ ಮೂಡಿಸಬೇಕು’ ಎಂಬ ಉಲ್ಲೇಖವಿರುವ ಕರಪತ್ರಗಳನ್ನು ವಿತರಿಸಿ ಸ್ವಚ್ಛತಾ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಒತ್ತು ನೀಡಲಾಯಿತು.
ಅಭಿಯಾನದಲ್ಲಿ ಟೀಮ್ ಸ್ವಚ್ಛ ಪುತ್ತೂರು ಸಂಚಾಲಕ ಶ್ರೀಕೃಷ್ಣ ಉಪಾಧ್ಯಾಯ, ಜಿ. ಕೃಷ್ಣ, ಸಂದೀಪ್ ಲೋಬೋ, ಕೃಷ್ಣ ಮೋಹನ್, ಡಾ. ಸದಾಶಿವ ಭಟ್, ಯುವ ಕಾರ್ಯಕರ್ತ ವಿಜೇತಾ ಬಲ್ಲಾಳ್, ಸುರೇಶ್ ಕಲ್ಲಾರೆ, ಜಯಪ್ರಕಾಶ್ ಆಚಾರ್ಯ, ಶಂಕರ್ ಮಲ್ಯ ಇದ್ದರು