ಬೆಂಗಳೂರು: ವಿರಾಜ್ ಮಾದಪ್ಪ ಹಾಗೂ ರಶೀದ್ ಖಾನ್ ಈ ವರ್ಷ ಹ್ಯಾಂಗ್ಜೌನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ ಗಾಲ್ಫ್ ಟೂರ್ನಿಗೆ ಭಾರತ ತಂಡದಲ್ಲಿ ಅರ್ಹತೆ ಗಿಟ್ಟಿಸಿದ್ದಾರೆ. ಮಹಿಳಾ ವಿಭಾಗದಲ್ಲಿ ಅವನಿ ಪ್ರಶಾಂತ್ ಅವಕಾಶ ಗಳಿಸಿದ್ದಾರೆ.
ಇಲ್ಲಿಯ ಕರ್ನಾಟಕ ಗಾಲ್ಫ್ ಸಂಸ್ಥೆಯ ಅಂಗಣದಲ್ಲಿ ಶನಿವಾರ ಕೊನೆಗೊಂಡ ಟ್ರಯಲ್ಸ್ಗಳಲ್ಲಿ ಈ ಆಟಗಾರರು ಮಿಂಚಿದರು.
ಐದು ಸುತ್ತುಗಳ ಟ್ರಯಲ್ಸ್ನ ಪುರುಷರ ವಿಭಾಗದಲ್ಲಿ ವಿರಾಜ್ ಹಾಗೂ ರಶೀದ್ ಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನ ಗಳಿಸಿದರು. ಮಹಿಳೆಯರ ವಿಭಾಗದಲ್ಲಿ ಅವನಿ ಪ್ರಶಾಂತ್, ಬಕ್ಷಿ ಸಹೋದರಿಯರಾದ ಜಾಹ್ನವಿ ಮತ್ತು ಹಿತಾಶಿ ಅವರನ್ನು ಹಿಂದಿಕ್ಕಿ ಅಗ್ರಸ್ಥಾನ ಗಳಿಸಿದರು.
ಪುರುಷರ ವಿಭಾಗದಲ್ಲಿ ಎರಡು ಸ್ಥಾನಗಳ ಆಯ್ಕೆಗಾಗಿ 16 ಮಂದಿ ಮತ್ತು ಮಹಿಳೆಯರ ವಿಭಾಗದಲ್ಲಿ ಇದ್ದ ಒಂದು ಸ್ಥಾನಕ್ಕಾಗಿ 11 ಮಂದಿ ಸ್ಪರ್ಧಿಸಿದ್ದರು.ಅನಿರ್ಬನ್ ಲಾಹಿರಿ ಮತ್ತು ಶುಭಂಕರ್ ಶರ್ಮಾ ಅವರು ವಿಶ್ವ ರ್ಯಾಂಕಿಂಗ್ ಆಧಾರದಲ್ಲಿ ಈಗಾಗಲೇ ಏಷ್ಯನ್ ಗೇಮ್ಸ್ಗೆ ಅರ್ಹತೆ ಗಳಿಸಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಅದಿತಿ ಅಶೋಕ್ ಮತ್ತು ತ್ವೇಷಾ ಮಲಿಕ್ ಸಹ ರ್ಯಾಂಕಿಂಗ್ ಆಧಾರದಲ್ಲಿ ಪ್ರವೇಶ ಗಿಟ್ಟಿಸಿದ್ದಾರೆ.
ಏಷ್ಯನ್ ಗೇಮ್ಸ್ ಈ ವರ್ಷ ಸೆಪ್ಟೆಂಬರ್ 10ರಿಂದ 25ರವರೆಗೆ ನಿಗದಿಯಾಗಿದೆ.