ನವದೆಹಲಿ (ಪಿಟಿಐ): ಉತ್ತಮ ಸಾಮರ್ಥ್ಯ ತೋರಿದ ಭಾರತ ಹರ್ಮೀತ್ ದೇಸಾಯಿ–ಮಾನವ್ ಥಕ್ಕರ್ ಮತ್ತು ಶರತ್ ಕಮಲ್– ಜಿ.ಸತ್ಯನ್ ಇಲ್ಲಿ ಏಷ್ಯನ್ ಟೇಬಲ್ ಟೆನಿಸ್ ಚಾಂಪಿಯನ್ಷಿಪ್ನಡಬಲ್ಸ್ ವಿಭಾಗಗಳಲ್ಲಿ ಕಂಚಿನ ಪದಕ ಗೆದ್ದುಕೊಂಡರು.
ಟೂರ್ನಿಯ ಮೊದಲ ಸೆಮಿಫೈನಲ್ ಹಣಾಹಣಿಯಲ್ಲಿ ಎಂಟನೇ ಶ್ರೇಯಾಂಕದ ಹರ್ಮೀತ್– ಮಾನವ್ 11–4, 11–6, 10–12, 9–11, 8–11ರಿಂದ ಐದನೇ ಶ್ರೇಯಾಂಕ ಪಡೆದಿದ್ದ ದಕ್ಷಿಣ ಕೊರಿಯಾ ಆಟಗಾರರಾದ ವೂಜಿನ್ ಜಾಂಗ್ ಮತ್ತು ಜಾಂಗೂನ್ ಲಿಮ್ ಎದುರು ಎಡವಿದರು. ಕೇವಲ 44 ನಿಮಿಷಗಳಲ್ಲಿ ಈ ಸೆಣಸಾಟ ಅಂತ್ಯವಾಯಿತು.
ಆರನೇ ಶ್ರೇಯಾಂಕ ಪಡೆದಿದ್ದ ಶರತ್ ಹಾಗೂ ಸತ್ಯನ್ ನಾಲ್ಕರ ಘಟ್ಟದ ಹಣಾಹಣಿಯಲ್ಲಿ ಜಪಾನ್ ಆಟಗಾರರ ಎದುರು ಮಣಿದರು. ಜಪಾನ್ನ ಯೂಕಿಯಾ ಯುಡಾ– ಶುನ್ಸುಕೆ ತೊಗೊಮಿ ಜೋಡಿಯು 33 ನಿಮಿಷಗಳ ಅವಧಿಯಲ್ಲಿ 11–5, 11–9, 13–11ರಿಂದ ಭಾರತದ ಜೋಡಿಯನ್ನು ಪರಾಭವಗೊಳಿಸಿತು.
ಕಳೆದ ವಾರ ತಂಡ ವಿಭಾಗದಲ್ಲೂ ಭಾರತದ ಪುರುಷರು ಕಂಚಿನ ಪದಕವನ್ನು ಗೆದ್ದುಕೊಂಡಿದ್ದರು.