ಬೆಳಗಾವಿ: ಪರಂಪರೆಯನ್ನು ಮುಂದಿಟ್ಟುಕೊಂಡು ಬರೆಯುವ ಕವಿತೆಗಳು ಓದುಗರಿಗೆ ಹೆಚ್ಚು ಹತ್ತಿರವಾಗುತ್ತವೆ ಎಂದು ಸಾಹಿತಿ ಚಂದ್ರಕಾಂತ ಪೋಕಳೆ ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲಾ ಲೇಖಕಿಯರ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಇಲ್ಲಿನ ಕನ್ನಡ ಸಾಹಿತ್ಯ ಭವನದಲ್ಲಿ ಸೋಮವಾರ ಆಯೋಜಿಸಿದ್ದ ‘ರುದ್ರಮ್ಮ ಮರುಳಪ್ಪ ಮತ್ತು ಗಂಗಾದೇವಿ ಸ್ಮರಣಾರ್ಥ ದತ್ತಿನಿಧಿ ಕಾರ್ಯಕ್ರಮ’ ಉದ್ಘಾಟಿಸಿ ಅವರು ಮಾತನಾಡಿದರು.
‘ಕವಿತೆಯು ಭಾವ ಮತ್ತು ವಿಚಾರಗಳನ್ನು ಒಳಗೊಂಡಿದ್ದಾಗಿದೆ. ದಿನನಿತ್ಯದ ಆಗುಹೋಗುಗಳನ್ನು ಕವಿತೆಯಾಗಿಸುವುದು ಉನ್ನತ ವಿಚಾರಗಳನ್ನು ಇಟ್ಟುಕೊಂಡು ಕವಿತೆ ಬರೆಯುವುದಕ್ಕಿಂತಲೂ ಕಠಿಣವಾದುದು’ ಎಂದರು.
ಅಧ್ಯಕ್ಷತೆ ವಹಿಸಿದ್ದ ಲೇಖಕಿಯರ ಸಂಘದ ಅಧ್ಯಕ್ಷೆ ದೀಪಿಕಾ ಚಾಟೆ, ‘ಭಾಷೆಗಳು ಪರಸ್ಪರ ಬಂಧುತ್ವ ಬೆಸೆಯುವುದಕ್ಕೆ ಸಹಾಯವಾಗಬೇಕೇ ಹೊರತು ಕಿತ್ತಾಡುವುದಕ್ಕಲ್ಲ. ಗಡಿಯಲ್ಲಿರುವ ಎಲ್ಲರೂ ಸೌಹಾರ್ದದಿಂದ ಜೀವನ ನಡೆಸಬೇಕು ಪರಸ್ಪರ ಸಹಾಯಕ್ಕೆ ಬರಬೇಕು’ ಎಂದು ಆಶಿಸಿದರು.
ನಂತರ ನಡೆದ ಬಹು ಭಾಷಾ ಕವಿಗೋಷ್ಠಿಯಲ್ಲಿ ನೀಲಗಂಗಾ ಚರಂತಿಮಠ, ಲೀಲಾ ಕಲಕೋಟಿ, ರಜನಿ ಜೀರಗ್ಯಾಳ, ಹಮೀದಾ ಬೇಗಂ ದೇಸಾಯಿ, ಸುನಂದಾ ಎಮ್ಮಿ , ರಾಧಾ ಶ್ಯಾಮರಾವ್, ಕವಿತಾ ಕುಸಗಲ್ಲ, ಅನುರಾಧಾ ಕುಲಕರ್ಣಿ, ಲಲಿತಾ ಕ್ಯಾಸನ್ನವರ, ಜಯಶ್ರೀ ನಿರಾಕಾರಿ ಕವನ ವಾಚಿಸಿದರು.