ಭುವನೇಶ್ವರ: ಥಾಮಸ್ ಕಪ್ ಟೂರ್ನಿಯಲ್ಲಿ ಭಾರತ ಬ್ಯಾಡ್ಮಿಂಟನ್ ತಂಡ ಮೊದಲ ಚಿನ್ನ ಗೆದ್ದ ಸಂಭ್ರಮದ ಬೆನ್ನಲ್ಲೇ ಕ್ರೀಡಾಪಟುಗಳಿಗೆ ಮತ್ತೊಂದು ಶುಭ ಸುದ್ದಿ ಬಂದಿದೆ. ಈ ಕ್ರೀಡೆಗೆ ಸಂಬಂಧಿಸಿದ ಸುಸಜ್ಜಿತ ಹೈ ಪರ್ಫಾರ್ಮೆನ್ಸ್ ಕೇಂದ್ರ (ಎಚ್ಪಿಸಿ) ಭುವನೇಶ್ವರದಲ್ಲಿ ಸಜ್ಜಾಗುತ್ತಿದೆ.
ದಾಲ್ಮಿಯಾ ಭಾರತ್ ಗೋಪಿಚಂದ್ ಒಡಿಶಾ ಬ್ಯಾಡ್ಮಿಂಟನ್ ಅಕಾಡೆಮಿ ಎಂಬ ಹೆಸರಿನ ಕೇಂದ್ರದ ಕಾಮಗಾರಿ ಕೊನೆಯ ಹಂತದಲ್ಲಿದ್ದು ಸೆಪ್ಟೆಂಬರ್ನಲ್ಲಿ ಬಳಕೆಗೆ ಸಿದ್ಧವಾಗಲಿದೆ. ಪುಲ್ಲೇಲ ಗೋಪಿಚಂದ್ ಅವರು ಇದರ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ ಎಂದು ರಾಜ್ಯದ ಕ್ರೀಡಾ ಇಲಾಖೆ ಸೋಮವಾರ ತಿಳಿಸಿದೆ.
ಕೇಂದ್ರಕ್ಕಾಗಿ ಒಡಿಶಾ ಸರ್ಕಾರ 3 ಎಕರೆ ಜಮೀನು ನೀಡಿತ್ತು. ದಾಲ್ಮಿಯಾ ಭಾರತ್ ಸಮೂಹದವರು ₹ 55 ಕೋಟಿ ವೆಚ್ಚದಲ್ಲಿ ನಿರ್ಮಾಣ ಕಾಮಗಾರಿ ನಡೆಸಿದ್ದಾರೆ. ಭಾರತ ತಂಡದ ಮಾಜಿ ಮುಖ್ಯ ಕೊಚ್ ಪುಲ್ಲೇಲ ಗೋಪಿಚಂದ್ ಅವರ ನಿರ್ದೇಶನದಲ್ಲಿ ಕೇಂದ್ರ ಸ್ಥಾಪನೆಯಾಗಿದೆ. ತರಬೇತಿ ಮತ್ತು ಅಭ್ಯಾಸಕ್ಕೆ ಇಲ್ಲಿ ವಿಶ್ವ ದರ್ಜೆಯ ಸೌಲಭ್ಯಗಳು ಸಿದ್ಧವಾಗಲಿವೆ.
500 ಮಂದಿಗೆ ಆಸನ ವ್ಯವಸ್ಥೆ ಇರುವ ಕೇಂದ್ರದಲ್ಲಿ ಎಂಟು ಅಂಗಣಗಳು ಇರುತ್ತವೆ. ಜಿಮ್ನಾಶಿಯಂ, ಕ್ರೀಡಾವಿಜ್ಞಾನ ಕೊಠಡಿ, ಹೆಲ್ತ್ ಕ್ಲಬ್ ಇತ್ಯಾದಿ ಒಳಗೊಂಡಿರುವ ಕೇಂದ್ರದಲ್ಲಿ ಆಟಗಾರರು, ಕೋಚ್ಗಳು ಮತ್ತು ನೆರವು ಸಿಬ್ಬಂದಿಗೆ ಬೋರ್ಡಿಂಗ್, ಲಾಡ್ಜಿಂಗ್ ಸೌಲಭ್ಯ ಇರುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ದಾಲ್ಮಿಯಾ ಭಾರತ್ ಸಮೂಹ ಮತ್ತು ಪುಲ್ಲೇಲ ಗೋಪಿಚಂದ್ ಬ್ಯಾಡ್ಮಿಂಟನ್ ಫೌಂಡೇಷನ್ ಜೊತೆ ಒಡಿಶಾ ಸರ್ಕಾರ 2018ರಲ್ಲಿ ಒಪ್ಪಂದಕ್ಕೆ ಸಹಿ ಹಾಕಿತ್ತು. 2019ರಲ್ಲಿ ಕಾಮಗಾರಿ ಆರಂಭವಾಗಿತ್ತು.