ಭಾನುವಾರ ಎಚ್ಎಸ್ಆರ್ ಬಡಾವಣೆಯ ದಿ ಮ್ಯಾಜೆಸ್ಟಿನ್ ಸ್ಪೋರ್ಟ್ಸ್ ಅಕಾಡೆಮಿಗೆ ಸನ್ಮಾನ ಸ್ವೀಕರಿಸಲು ಸಿಂಧು ಮತ್ತು ಕಿದಂಬಿ ಶ್ರೀಕಾಂತ್ ಆಗಮಿಸಿದ್ದರು. ವಿಶ್ವ ಚಾಂಪಿಯನ್ ಆದ ನಂತರ ಇದೇ ಮೊದಲ ಬಾರಿಗೆ ಸಿಂಧು ಬೆಂಗಳೂರಿಗೆ ಬಂದಿದ್ದರು. ಅವರನ್ನು ನೋಡಲು ಸೇರಿದ್ದ ಅಕಾಡೆಮಿಯ ಕಿರಿಯ ಆಟಗಾರರು ಮತ್ತು ಶಾಲೆಗಳ ವಿದ್ಯಾರ್ಥಿಗಳು, ಪಾಲಕರು ಸಿಂಧು ಮತ್ತು ಶ್ರೀಕಾಂತ್ ಅವರ ಹಸ್ತಾಕ್ಷರ ಪಡೆಯಲು, ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದರು. ಸಿಂಧು ಜೊತೆಯಲ್ಲಿದ್ದ ಅವರ ತಂದೆ ರಮಣ್ ಅವರೊಂದಿಗೂ ಮಕ್ಕಳು, ಪಾಲಕರು ಫೋಟೊ ತೆಗೆಸಿಕೊಂಡರು.