ನವದೆಹಲಿ: ‘ಕೊರೊನಾ ಮಹಾಮಾರಿಯಿಂದಾಗಿ ಮುಂದೂಡಲ್ಪಟ್ಟಿರುವ ಒಲಿಂಪಿಕ್ಸ್ ಅರ್ಹತಾ ಟೂರ್ನಿಗಳೆಲ್ಲಾ ನಡೆಯುತ್ತವೆ. ಹೀಗಾಗಿ ಯಾರೂ ಆತಂಕಕ್ಕೊಳಗಾಗಬೇಡಿ’ ಎಂದು ಭಾರತ ಒಲಿಂಪಿಕ್ ಸಂಸ್ಥೆಯ (ಐಒಎ) ಅಧ್ಯಕ್ಷ ನರಿಂದರ್ ಬಾತ್ರಾ ಶನಿವಾರ ಹೇಳಿದ್ದಾರೆ.
‘ಪರಿಸ್ಥಿತಿ ಸುಧಾರಿಸಿದ ಬಳಿಕ ಎಲ್ಲಾ ಟೂರ್ನಿಗಳನ್ನು ಆಯೋಜಿಸಲಾಗುತ್ತದೆ. ಪರಿಷ್ಕೃತ ದಿನಾಂಕಗಳನ್ನು ಶೀಘ್ರವೇ ತಿಳಿಸಲಾಗುತ್ತದೆ. ನಿಮ್ಮ ಕ್ರೀಡೆಗಳಲ್ಲಿ ನಡೆಯಬೇಕಿರುವ ಟೂರ್ನಿಗಳ ಪಟ್ಟಿಯನ್ನು ಸಿದ್ಧಪಡಿಸಿ ನನಗೆ ಕೊಡಿ’ ಎಂದು ಬಾತ್ರಾ ಅವರು ರಾಷ್ಟ್ರೀಯ ಕ್ರೀಡಾ ಫೆಡರೇಷನ್ಗಳ (ಎನ್ಎಸ್ಎಫ್) ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
‘ಒಲಿಂಪಿಕ್ ಕ್ರೀಡಾಕೂಟವನ್ನು ಒಂದು ವರ್ಷ ಮುಂದಕ್ಕೆ ಹಾಕಲಾಗಿದೆ. ಕೆಲ ಕೋಚ್ಗಳು, ಹೈ ಪರ್ಫಾರ್ಮೆನ್ಸ್ ಡೈರೆಕ್ಟರ್ಗಳು ಮತ್ತು ನೆರವು ಸಿಬ್ಬಂದಿ ಜೊತೆಗಿನ ಒಪ್ಪಂದವು ಈ ವರ್ಷದ ಆಗಸ್ಟ್ನಲ್ಲಿ ಕೊನೆಗೊಳ್ಳಲಿದೆ. ಅಂತಹವರ ಒಪ್ಪಂದವನ್ನು ಇನ್ನೊಂದು ವರ್ಷ ವಿಸ್ತರಿಸಲು ಕ್ರಮ ಕೈಗೊಳ್ಳಲಿದ್ದೇವೆ’ ಎಂದು ನುಡಿದಿದ್ದಾರೆ.
‘ಅಥ್ಲೀಟ್ಗಳು ಸದ್ಯ ಎಲ್ಲಿದ್ದಾರೆ. ಅವರ ಆರೋಗ್ಯ ಹೇಗಿದೆ ಎಂಬುದರ ಕುರಿತು ಎಲ್ಲರೂ ನನಗೆ ಮಾಹಿತಿ ನೀಡಿ. ಮುಂದಿನ ವರ್ಷದ ಒಲಿಂಪಿಕ್ಸ್ಗೆ ತರಬೇತಿ ಕೈಗೊಳ್ಳುವ ಬಗ್ಗೆಯೂ ಯೋಜನೆ ರೂಪಿಸಿ’ ಎಂದಿದ್ದಾರೆ.
ಅಥ್ಲೆಟಿಕ್ಸ್, ಆರ್ಚರಿ, ಬಾಕ್ಸಿಂಗ್, ಈಕ್ವೆಸ್ಟ್ರಿಯನ್, ಹಾಕಿ, ಶೂಟಿಂಗ್ ಹಾಗೂ ಕುಸ್ತಿ ಸ್ಪರ್ಧೆಗಳಲ್ಲಿ ಭಾರತದ ಸುಮಾರು 80 ಕ್ರೀಡಾಪಟುಗಳು ಈಗಾಗಲೇ ಒಲಿಂಪಿಕ್ಸ್ಗೆ ಅರ್ಹತೆ ಗಳಿಸಿದ್ದಾರೆ.