ಬೆಂಗಳೂರು: ಸಾಯ್ ತಂಡದವರು ಹಾಕಿ ಕರ್ನಾಟಕ ಆಶ್ರಯದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಸ್ಮಾರಕ ರಾಜ್ಯ ಮಟ್ಟದ ಹಾಕಿ ಟೂರ್ನಿಯ ಪಂದ್ಯದಲ್ಲಿ ಗೆದ್ದಿದ್ದಾರೆ.
ಶಾಂತಿನಗರದಲ್ಲಿರುವ ಕೆ.ಎಂ.ಕಾರ್ಯಪ್ಪ ಹಾಕಿ ಅರೆನಾದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಸಾಯ್ 3–0 ಗೋಲುಗಳಿಂದ ಕೊಡವ ಸಮಾಜ ತಂಡವನ್ನು ಪರಾಭವಗೊಳಿಸಿತು.
ಸಾಯ್ ತಂಡದ ಹರೀಶ್ ಮುಟಗರ್ 25ನೇ ನಿಮಿಷದಲ್ಲಿ ಖಾತೆ ತೆರೆದರು. 55ನೇ ನಿಮಿಷದಲ್ಲಿ ಮೋಕ್ಷಿತ್ ಉತ್ತಪ್ಪ ಗೋಲು ಹೊಡೆದು 2–0 ಮುನ್ನಡೆಗೆ ಕಾರಣರಾದರು. 60ನೇ ನಿಮಿಷದಲ್ಲಿ ಐ.ಇ.ಪಳಂಗಪ್ಪ ಚೆಂಡನ್ನು ಗುರಿ ಮುಟ್ಟಿಸಿ ತಂಡದ ಗೆಲುವಿನ ಅಂತರ ಹೆಚ್ಚಿಸಿದರು.
ದಿನದ ಇನ್ನೊಂದು ಪಂದ್ಯದಲ್ಲಿ ಎಂಇಜಿ 4–1 ಗೋಲುಗಳಿಂದ ಪೋಸ್ಟಲ್ ತಂಡದ ಎದುರು ಗೆದ್ದಿತು.
ಎಂಇಜಿ ತಂಡದ ರಾಹುಲ್ ಏಳನೇ ನಿಮಿಷದಲ್ಲಿ ಗೋಲು ಹೊಡೆದರು. 39ನೇ ನಿಮಿಷದಲ್ಲಿ ಶಕ್ತಿ ಚೆಂಡನ್ನು ಗುರಿ ತಲುಪಿಸಿದರು. ಬಿ.ಬಿ.ಮಾಚಯ್ಯ ಮತ್ತು ಎ.ಜೆ.ರಾಕೇಶ್ ಅವರು ಕ್ರಮವಾಗಿ 51 ಮತ್ತು 59ನೇ ನಿಮಿಷಗಳಲ್ಲಿ ಗೋಲು ಬಾರಿಸಿ ತಂಡದ ಸಂಭ್ರಮಕ್ಕೆ ಕಾರಣರಾದರು.
ಪೋಸ್ಟಲ್ ತಂಡದ ನವೀನ್ ಕುಮಾರ್ ಮೂರನೇ ನಿಮಿಷದಲ್ಲಿ ಗೋಲು ಗಳಿಸಿ ಗಮನ ಸೆಳೆದರು.