ಬೆಂಗಳೂರು: ‘ಸಮಾಜದಲ್ಲಿ ಸಮಾನತೆ ಬಯಸದವರು ಸಂವಿಧಾನ ತಿದ್ದುಪಡಿ ಕುರಿತು ಮಾತನಾಡುತ್ತಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ವಾಹನ ವಿತರಿಸಿ ಮಾತನಾಡಿದ ಅವರು, ‘ಅಸಮಾನತೆ ಇದ್ದರೆ ಶೋಷಣೆಗೆ ಅವಕಾಶವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.
‘ಎಲ್ಲರೂ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಬಲರಾಗಬೇಕು ಎಂಬ ಆಶಯವನ್ನು ಸಂವಿಧಾನ ಹೊಂದಿದೆ. ಆ ಆಶಯ ಅನುಷ್ಠಾನಗೊಳಿಸುವುದು ಚುನಾಯಿತ ಸರ್ಕಾರದ ಜವಾಬ್ದಾರಿ’ ಎಂದು ಪ್ರತಿಪಾದಿಸಿದರು.
‘ಯಾವುದೇ ಸಮುದಾಯ ಶಿಕ್ಷಣ ಪಡೆದು ಆರ್ಥಿಕವಾಗಿ ಸಬಲರಾದರೆ ಮುಖ್ಯವಾಹಿನಿಗೆ ಸೇರ್ಪಡೆಯಾಗುತ್ತದೆ. ಹೀಗಾಗಿ ನಮ್ಮ ಸರ್ಕಾರ ಇಂಥ ಸಮುದಾಯದವರ ನೆರವಿಗೆ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ’ ಎಂದರು.
2017–18ನೇ ಸಾಲಿನಲ್ಲಿ ಬಜೆಟ್ನಲ್ಲಿ ಘೋಷಿಸಿದಂತೆ 500 ಅಲ್ಪಸಂಖ್ಯಾತರಿಗೆ ವಾಹನ ಖರೀದಿಗಾಗಿ ತಲಾ ₹ 3 ಲಕ್ಷ ಸಹಾಯಧನ ವಿತರಿಸಲಾಗುತ್ತಿದೆ. ಅಲ್ಪಸಂಖ್ಯಾತರಲ್ಲಿ ಶಿಕ್ಷಣ ಕಡಿಮೆ. ಬಡವರು ಜಾಸ್ತಿ ಎಂಬುದನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆ ಪ್ರಕಟಿಸಿದ್ದೆ. ಮುಂದಿನ ವರ್ಷದಿಂದ ಇನ್ನೂ ಹೆಚ್ಚು ವಾಹನಗಳನ್ನು ನೀಡಲಾಗುವುದು’ ಎಂದು ಭರವಸೆ ನೀಡಿದರು.