ಪಿಸ್ಕೊ, ಪೆರು: ಅಪೂರ್ವ ಚಾಲನ ಕೌಶಲ ಮೆರೆದ ಕರ್ನಾಟಕದ ಕೆ.ಪಿ.ಅರವಿಂದ್, ವಿಶ್ವ ಪ್ರಸಿದ್ಧ ಡಕಾರ್ ರ್ಯಾಲಿಯಲ್ಲಿ ಒಟ್ಟಾರೆ 37ನೇ ಸ್ಥಾನ ಗಳಿಸಿ ದಾಖಲೆ ನಿರ್ಮಿಸಿದ್ದಾರೆ.
ಈ ಬಾರಿ ರ್ಯಾಲಿ ಪೂರ್ಣಗೊಳಿಸಿದ ಭಾರತದ ಏಕೈಕ ಬೈಕ್ ಸಾಹಸಿ ಎಂಬ ಹಿರಿಮೆಗೆ ಅವರು ಪಾತ್ರರಾಗಿದ್ದಾರೆ.
ಶೆರ್ಕೊ ಟಿವಿಎಸ್ ರೇಸಿಂಗ್ ತಂಡದ ಅರವಿಂದ್, ಮೂರನೇ ಬಾರಿ ರ್ಯಾಲಿಯಲ್ಲಿ ಭಾಗವಹಿಸಿದ್ದರು.
ಶುಕ್ರವಾರ ನಡೆದ ಅಂತಿಮ ಲೆಗ್ನ ಸ್ಪರ್ಧೆಯ ವೇಳೆ ಮರಳುಗಾಡಿನ ಇಳಿಜಾರಿನಲ್ಲಿ ಸಾಗುವಾಗ ಅರವಿಂದ್ ಚಲಾಯಿಸುತ್ತಿದ್ದ ಮೋಟರ್ ಬೈಕ್, ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಬಿದ್ದಿತು. ಹೀಗಿದ್ದರೂ ಅಂಜದ ಅವರು ಸ್ಥಳೀಯರ ನೆರವು ಪಡೆದು ಗುರಿ ಮುಟ್ಟುವಲ್ಲಿ ಯಶಸ್ವಿಯಾದರು.
‘ಎಳವೆಯಲ್ಲಿ ಕಂಡ ಕನಸು ಈಗ ಸಾಕಾರಗೊಂಡಿದೆ. ಇದು ನನ್ನ ಪಾಲಿನ ಅವಿಸ್ಮರಣೀಯ ಕ್ಷಣ. ಕಠಿಣ ಸವಾಲುಗಳನ್ನು ಮೆಟ್ಟಿನಿಂತು ರ್ಯಾಲಿ ಪೂರ್ಣಗೊಳಿಸಿದ್ದು ಅತೀವ ಸಂತಸ ನೀಡಿದೆ’ ಎಂದು ಅರವಿಂದ್ ಖುಷಿ ವ್ಯಕ್ತಪಡಿಸಿದ್ದಾರೆ.
ಟಿವಿಎಸ್ ತಂಡದ ಆಡ್ರಿಯನ್ ಮೆಟ್ಗೆ ಮತ್ತು ಮೈಕಲ್ ಮೆಟ್ಗೆ ಕ್ರಮವಾಗಿ 22 ಮತ್ತು 25ನೇ ಸ್ಥಾನಗಳೊಂದಿಗೆ ಅಭಿಯಾನ ಮುಗಿಸಿದ್ದಾರೆ.
ಹೀರೊ ಮೋಟೊ ಸ್ಪೋರ್ಟ್ಸ್ ತಂಡದ ಒರಿಯಲ್ ಮೆನಾ ಒಟ್ಟಾರೆ ಒಂಬತ್ತನೇ ಸ್ಥಾನ ಪಡೆದರು. ಅವರು ಅಂತಿಮ ಹಂತದ ಸ್ಪರ್ಧೆಯಲ್ಲಿ 17ನೇ ಸ್ಥಾನ ಗಳಿಸಿದರು.
ಈ ತಂಡದ ಜಾವೊಕಿಮ್ ರಾಡ್ರಿಗಸ್ 17ನೇ ಸ್ಥಾನದೊಂದಿಗೆ ಸ್ಪರ್ಧೆ ಮುಗಿಸಿದರು.