ಬೆಂಗಳೂರು: ಪಶ್ಚಿಮ ಬಂಗಾಳದ ಅರ್ಘ್ಯದೀಪ್ ಮತ್ತು ಕರ್ನಾಟಕದ ಬಾಲಕಿಶನ್ ಅವರು ಆರ್.ಹನುಮಂತ ಸ್ಮರಣಾರ್ಥ ಬೆಂಗಳೂರು ಗ್ರಾಮಾಂತರ ಜಿಲ್ಲಾ ಚೆಸ್ ಸಂಸ್ಥೆ ಆಯೋಜಿಸಿದ್ದ ಫಿಡೆ ರೇಟೆಡ್ ಮುಕ್ತ ರ್ಯಾಪಿಡ್ ಚೆಸ್ ಟೂರ್ನಿಯಲ್ಲಿ ಪಾರಮ್ಯ ಮೆರೆದರು. ಅರ್ಘ್ಯದೀಪ್ ಪ್ರಶಸ್ತಿ ಗೆದ್ದುಕೊಂಡರೆ ಬಾಲಕಿಶನ್ ಎರಡನೇ ಸ್ಥಾನ ಗಳಿಸಿದರು.
ಅರ್ಘ್ಯದೀಪ್ 8.5 ಪಾಯಿಂಟ್ ಗಳಿಸಿದರೆ ಬಾಲಕಿಶನ್ 8 ಪಾಯಿಂಟ್ ತಮ್ಮದಾಗಿಸಿಕೊಂಡರು. 8 ಪಾಯಿಂಟ್ಗಳನ್ನು ಗಳಿಸಿದ ತಮಿಳುನಾಡಿನ ಪ್ರಸನ್ನ ಎಸ್ ಮತ್ತು ಕರ್ನಾಟಕದ ಶರಣ್ ರಾವ್ ಕ್ರಮವಾಗಿ 3 ಮತ್ತು 4ನೇ ಸ್ಥಾನ ಗಳಿಸಿದರು.
ತಲಾ 7.5 ಪಾಯಿಂಟ್ ಗಳಿಸಿದ ಸಮ್ಮೇದ್ ಜಯಕುಮಾರ್, ರವಿ ಷಣ್ಮುಖಂ, ಲೋಕೇಶ್ ಎನ್, ಚಕ್ರವರ್ತಿ ರೆಡ್ಡಿ ಹಾಗೂ ಭರತ್ ಕಲ್ಯಾಣ್ ಕ್ರಮವಾಗಿ 5ರಿಂದ 9ನೇ ಸ್ಥಾನ ಗಳಿಸಿದರು. 7 ಪಾಯಿಂಟ್ಗಳೊಂದಿಗೆ ರಾಜಾ ಋತ್ವಿಕ್ 10ನೇ ಸ್ಥಾನಕ್ಕೆ ಸಮಾಧಾನಪಟ್ಟುಕೊಂಡರು.
ರಾಮ್ ವಿಶ್ವನಾಥನ್ 18 ವರ್ಷದೊಳಗಿನವರ ಮತ್ತು ನಿದೇಶ್ 16 ವರ್ಷದೊಳಗಿನವರ ವಿಭಾಗದ ಪ್ರಶಸ್ತಿ ಗೆದ್ದರು. ಸ್ವರಲಕ್ಷ್ಮಿ ಎಸ್ ಹಾಗೂ ಶ್ರೇಯಸ್ ಭೌಮಿಕ್ ಕ್ರಮವಾಗಿ 14 ಮತ್ತು 12 ವರ್ಷದೊಳಗಿನವರ ವಿಭಾಗದ ಚಾಂಪಿಯನ್ ಆದರು.