ಬೆಂಗಳೂರು: ಈವರೆಗೂ ಕ್ರೀಡೆ ಎಲ್ಲ ಮಕ್ಕಳಿಗೂ ಪಠ್ಯಕ್ರಮದ ಭಾಗವಾಗಿರಲಿಲ್ಲ. ಕೇಂದ್ರ ಸರ್ಕಾರ ರೂಪಿಸಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಬಂದ ಬಳಿಕ ಕ್ರೀಡೆ ಸಾರ್ವತ್ರಿಕವಾಗಿ ಪಠ್ಯಕ್ರಮದ ಭಾಗವಾಗಲಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಸಿ.ಟಿ. ರವಿ ಹೇಳಿದರು.
ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಸೋಮವಾರ ನಡೆದ 2017, 2018 ಮತ್ತು 2019ನೇ ಸಾಲಿನ ಏಕಲವ್ಯ, ಕ್ರೀಡಾ ರತ್ನ, ಜೀವಮಾನ ಸಾಧನೆ, ಕ್ರೀಡಾ ಪೋಷಕ ಮತ್ತು ರಾಷ್ಟ್ರೀಯ ಸೇವಾ ಯೋಜನಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗಿದೆ. ಈ ನೀತಿಯ ಅಡಿಯಲ್ಲಿ ಮುಂದಿನ ವರ್ಷದಿಂದ ಹೊಸ ಪಠ್ಯಕ್ರಮ ಜಾರಿಗೆ ಬರಲಿದೆ. ಆ ಬಳಿಕ ಎಲ್ಲ ಮಕ್ಕಳೂ ಕ್ರೀಡೆಯನ್ನು ಪಠ್ಯವಾಗಿ ಕಲಿಯುವ ಅವಕಾಶ ಲಭಿಸಲಿದೆ’ ಎಂದರು.
ಶಾಸಕ ರಿಜ್ವಾನ್ ಅರ್ಷದ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಂದಾಯ ಸಚಿವ ಆರ್. ಅಶೋಕ, ವಿಧಾನ ಪರಿಷತ್ ಸದಸ್ಯ ಕೆ. ಗೋವಿಂದರಾಜು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಲ್ಪನಾ ಉಪಸ್ಥಿತರಿದ್ದರು.