ಹಳಿಯಾಳ: ಕಾಂಗ್ರೆಸ್ ಅಭ್ಯರ್ಥಿ ಆರ್.ವಿ.ದೇಶಪಾಂಡೆ ಗೆಲುವು ಸಾಧಿಸುತ್ತಿದ್ದಂತೆ ಹಳಿಯಾಳ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಯೊಂದು ಬಡಾವಣೆಗಳಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಕೆಲವರು ದ್ವಿಚಕ್ರ ವಾಹನಗಳಲ್ಲಿ ತೆರಳಿ ಕಾಂಗ್ರೆಸ್ ಪಕ್ಷ ಹಾಗೂ ಆರ್.ವಿ.ದೇಶಪಾಂಡೆ ಅವರಿಗೆ ಜಯಘೋಷ ಕೂಗಿದರು. 8ನೇ ಬಾರಿ ಶಾಸಕನಾಗಿ ಆಯ್ಕೆಯಾಗಿ ಕುಮಟಾದಿಂದ ಸಂಜೆ 5.30ರ ಸುಮಾರಿಗೆ ಹಳಿಯಾಳಕ್ಕೆ ಅವರು ಆಗಮಿಸಿದರು. ಆಗ ಕಾರ್ಯಕರ್ತರು ಪುನಃ ಸಿಡಿಮದ್ದು ಸಿಡಿಸಿ ಸಿಹಿ ಹಂಚಿದರು. ಭಾರಿ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು ದೇಶಪಾಂಡೆ ಅವರಿಗೆ ಹೂವಿನ ಹಾರ ಹಾಕಿ ಸನ್ಮಾನಿಸಿದರು.
ವಿಧಾನ ಪರಿಷತ್ ಎಸ್.ಎಲ್ ಘೋಟ್ನೆಕರ, ಪ್ರಶಾಂತ ದೇಶಪಾಂಡೆ ಅವರೂ ಇದ್ದರು. ಕೆಲವೇ ನಿಮಿಷ ಪಟ್ಟಣದಲ್ಲಿದ್ದ ದೇಶಪಾಂಡೆ, ಹಳಿಯಾಳಕ್ಕೆ ತೆರಳಿ ಕುಟುಂಬ ಸಮೇತರಾಗಿ ಬೆಂಗಳೂರಿಗೆ ಸಂಜೆ 6ಕ್ಕೆ ಪ್ರಯಾಣ ಬೆಳೆಸಿದರು.