ನವದೆಹಲಿ: ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಸ್ಪರ್ಧಿಸಲಿರುವ ಭಾರತದ ಅಥ್ಲೆಟಿಕ್ಸ್ ತಂಡದಲ್ಲಿ ಹೈಜಂಪ್ ಅಥ್ಲೀಟ್ ತೇಜಸ್ವಿನ್ ಶಂಕರ್ ಅವರನ್ನು ಸೇರ್ಪಡೆ ಮಾಡಲಾಗಿದೆ ಎಂದು ಭಾರತ ಅಥ್ಲೆಟಿಕ್ಸ್ ಫೆಡರೇಷನ್ ದೆಹಲಿ ಹೈಕೋರ್ಟ್ಗೆ ತಿಳಿಸಿದೆ.
ಶಂಕರ್ ಅವರನ್ನು ತಂಡದಿಂದ ಕೈಬಿಟ್ಟಿದ್ದನ್ನು ಪ್ರಶ್ನಿಸಿ ಸಲ್ಲಿಸಿರುವ ದೂರಿನ ವಿಚಾರಣೆಯನ್ನು ನ್ಯಾಯಮೂರ್ತಿ ಯಶವಂತ್ ವರ್ಮಾ ನಡೆಸುತ್ತಿದ್ದಾರೆ. ಆಯ್ಕೆ ಪ್ರಕ್ರಿಯೆ ಮತ್ತು ಶಂಕರ್ ಅವರನ್ನು ಕೈಬಿಟ್ಟಿದ್ದರ ಕುರಿತು ವಿವರಣೆಯನ್ನು ಕೇಳಿದ್ದರು.
‘ರಿಲೆ ತಂಡದಲ್ಲಿ ಒಬ್ಬ ಅಥ್ಲೀಟ್ ಅನರ್ಹಗೊಂಡಿದ್ದಾರೆ. ಆದ್ದರಿಂದ ಒಂದು ಸ್ಥಾನ ತೆರವಾಗಿದೆ. ಆದ್ದರಿಂದ ತೇಜಸ್ವಿನ್ ಶಂಕರ್ ಅವರನ್ನು ಆ ಜಾಗಕ್ಕೆ ಸೇರ್ಪಡೆ ಮಾಡಲು ಅವಕಾಶ ಲಭಿಸಿದೆ’ ಎಂದು ಎಎಫ್ಐ ಪರ ವಕೀಲರು ನ್ಯಾಯಪೀಠದ ಮುಂದೆ ವಿವರಣೆ ನೀಡಿದರು.
ಇದೇ 28 ರಿಂದ ಆಗಸ್ಟ್ 8ರವರೆಗೆ ಬರ್ಮಿಂಗ್ಹ್ಯಾಮ್ನಲ್ಲಿ ಕಾಮನ್ವೆಲ್ತ್ ಕ್ರೀಡಾಕೂಟ ನಡೆಯಲಿದೆ.