ಮ್ಯಾಡ್ರಿಡ್: ಉತ್ತಮ ಪೈಪೋಟಿ ನೀಡಿದರೂ ಭಾರತ ತಂಡ, ಎಂಟು ರಾಷ್ಟ್ರಗಳ ಜೂನಿಯರ್ (21 ವರ್ಷದೊಳಗಿನವರ) ಆಹ್ವಾನ ಹಾಕಿ ಟೂರ್ನಿಯಲ್ಲಿ ಮಂಗಳವಾರ ನೆದರ್ಲೆಂಡ್ಸ್ ಎದುರು 2–3 ಗೋಲುಗಳಿಂದ ಸೋಲನುಭವಿಸಬೇಕಾಯಿತು.
ಮೊದಲ ಕ್ವಾರ್ಟರ್ನ ಐದನೇ ನಿಮಿಷ ನೆದರ್ಲೆಂಡ್ಸ್ ಜಿಮ್ ವಾನ್ ಡೆವೆನ್ನೆ ಗಳಿಸಿದ ಗೋಲಿನಿಂದ ಮುನ್ನಡೆಯಿತು. ಎರಡನೇ ಕ್ವಾರ್ಟರ್ನಲ್ಲಿ (ಪಂದ್ಯದ 23ನೇ ನಿಮಿಷ) ವಿಷ್ಣಕಾಂತ್ ಸಿಂಗ್ ಗಳಿಸಿದ ಗೋಲಿನಿಂದ ಭಾರತ ಸ್ಕೋರ್ ಸಮ ಮಾಡಿಕೊಂಡಿತು. ಆದರೆ ಮೂರೇ ನಿಮಿಷಗಳಲ್ಲಿ ವಾನ್ ಡೆವೆನ್ನೆ ತಂಡಕ್ಕೆ ದೊರೆತ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿದರು. ವಿರಾಮದ ವೇಳೆ ನೆದರ್ಲೆಂಡ್ಸ್ 2–1 ರಿಂದ ಮುನ್ನಡೆಯಿತು.
ವಿರಾಮದ ನಂತರ ನೆದರ್ಲೆಂಡ್ಸ್, ಪಂದ್ಯದ 32ನೇ ನಿಮಿಷ ಡೆರ್ಕ್ ಡಿವಿಲ್ಡರ್ ಮೂಲಕ ಮುನ್ನಡೆ ಹೆಚ್ಚಿಸಿಕೊಂಡಿತು. ಭಾರತ ಸತತ ದಾಳಿ ನಡೆಸಿ 36ನೇ ನಿಮಿಷ ಯಶಸ್ಸು ಪಡೆಯಿತು. ಭಾರತ ಸುದೀಪ್ ಚಿರ್ಮಾಕೊ ಗಳಿಸಿದ ಆಕರ್ಷಕ ಗೋಲಿನಿಂದ ಅಂತರ ಕಡಿಮೆ ಮಾಡಿಕೊಂಡಿತು.
ಅಂತಿಮ ಕ್ವಾರ್ಟರ್ನಲ್ಲಿ ಭಾರತ ಪ್ರತಿದಾಳಿಯನ್ನು ಮುಂದುವರಿಸಿದರೂ ಡಚ್ಚರ ರಕ್ಷಣಾ ಕೋಟೆ ಭೇದಿಸಲು ಸಾಧ್ಯವಾಲಿಲ್ಲ.
ಭಾರತ ತಂಡ, ಮುಂದಿನ ಪಂದ್ಯವನ್ನು ಗುರುವಾರ (13ರಂದು) ಆತಿಥೇಯ ಸ್ಪೇನ್ ವಿರುದ್ಧ ಆಡಲಿದೆ.