ಬೆಂಗಳೂರು: ಕರ್ನಾಟಕ ತಂಡದವರು ಗುಜರಾತ್ನಲ್ಲಿ ನಡೆಯುತ್ತಿರುವ 36ನೇ ರಾಷ್ಟ್ರೀಯ ಕ್ರೀಡಾಕೂಟದ ಹಾಕಿ ಟೂರ್ನಿಯ ಫೈನಲ್ ಪ್ರವೇಶಿಸಿದರು.
ಸೋಮವಾರ ನಡೆದ ಸೆಮಿಫೈನಲ್ನಲ್ಲಿ ಕರ್ನಾಟಕ 3–1 ಗೋಲುಗಳಿಂದ ಹರಿಯಾಣ ತಂಡವನ್ನು ಮಣಿಸಿತು. ಮಂಗಳವಾರ ನಡೆಯಲಿರುವ ಫೈನಲ್ನಲ್ಲಿ ರಾಜ್ಯ ತಂಡ, ಉತ್ತರ ಪ್ರದೇಶದ ಸವಾಲು ಎದುರಿಸಲಿದೆ. ಇನ್ನೊಂದು ನಾಲ್ಕರಘಟ್ಟದ ಪಂದ್ಯದಲ್ಲಿ ಉತ್ತರ ಪ್ರದೇಶ, ಟೈ ಬ್ರೇಕರ್ನಲ್ಲಿ 6–5 ರಲ್ಲಿ ಮಹಾರಾಷ್ಟ್ರ ಎದುರು ಗೆದ್ದಿತು.
ಹರಿಯಾಣ ಎದುರಿನ ಸೆಮಿಫೈನಲ್ ಪಂದ್ಯದಲ್ಲಿ ಆಭರಣ್ ಸುದೇವ್ ಅವರು ನಾಲ್ಕನೇ ನಿಮಿಷದಲ್ಲಿ ಗೋಲು ಗಳಿಸಿ ಕರ್ನಾಟಕಕ್ಕೆ ಮುನ್ನಡೆ ಗಳಿಸಿಕೊಟ್ಟರು. ಆದರೆ ತಿರುಗೇಟು ನೀಡಿದ ಹರಿಯಾಣ ತಂಡಕ್ಕೆ ಕೊಹಿನೂರ್ ಪ್ರೀತ್ ಸಿಂಗ್ ಅವರು 17ನೇ ನಿಮಿಷದಲ್ಲಿ ಸಮಬಲ ತಂದಿತ್ತರು.
ಮೂರನೇ ಕ್ವಾರ್ಟರ್ನಲ್ಲಿ ಯಾವುದೇ ಗೋಲುಗಳು ಬರಲಿಲ್ಲ. ಕೊನೆಯ ಕ್ವಾರ್ಟರ್ನಲ್ಲಿ ಚುರುಕಿನ ಆಟವಾಡಿದ ಕರ್ನಾಟಕ ತಂಡಕ್ಕೆ ನಿಕಿನ್ ತಿಮ್ಮಯ್ಯ (47ನೇ ನಿ.) ಮತ್ತು ಹರೀಶ್ ಮುಟಗರ್ (51) ಅವರು ಗೋಲು ಗಳಿಸಿ ಗೆಲುವು ತಂದಿತ್ತರು.
ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರ ನಡುವಣ ಸೆಮಿಫೈನಲ್ ಪಂದ್ಯದಲ್ಲಿ ಜಿದ್ದಾಜಿದ್ದಿನ ಹೋರಾಟ ಕಂಡುಬಂತು. ನಿಗದಿತ ಅವಧಿ ಕೊನೆಗೊಂಡಾಗ ಎರಡೂ ತಂಡಗಳು 3–3 ಗೋಲುಗಳಿಂದ ಸಮಬಲ ಸಾಧಿಸಿದ್ದವು. ಟೈ ಬ್ರೇಕರ್ನಲ್ಲಿ ಉತ್ತರ ಪ್ರದೇಶದ ಕೈಮೇಲಾಯಿತು.
ಸೆಮಿಗೆ ಸುಮಿತ್, ಸಂಜೀತ್ (ಪಿಟಿಐ ವರದಿ): ಬಾಕ್ಸರ್ಗಳಾದ ಸುಮಿತ್ ಕುಂದು, ಜಮುನಾ ಬೋರೊ ಮತ್ತು ಸಂಜೀತ್ ಅವರು ವಿವಿಧ ವಿಭಾಗಗಳಲ್ಲಿ ಸೆಮಿಫೈನಲ್ ಪ್ರವೇಶಿಸಿದರು.