ನವದೆಹಲಿ (ಪಿಟಿಐ): ಭಾರತ ಹಾಕಿ ತಂಡದ ಆಟಗಾರ ಬೀರೇಂದರ್ ಲಾಕ್ರ ಅವರ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ.
ಲಾಕ್ರ ಬಾಲ್ಯದ ಗೆಳೆಯ ಆನಂದ್ ಟೊಪ್ಪೊ ಫೆಬ್ರುವರಿ ತಿಂಗಳಲ್ಲಿ ಭುವನೇಶ್ವರದ ಫ್ಲ್ಯಾಟ್ವೊಂದರಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದರು. ಪೊಲೀಸರು ಈ ಸಂಬಂಧ ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದರು.
ಆದರೆ ಆನಂದ್ ಅವರ ತಂದೆ ಬಂಧನ್ ಇದೀಗ ಬಹಿರಂಗ ಹೇಳಿಕೆ ನೀಡಿದ್ದು, ‘ನನ್ನ ಮಗನದ್ದು ಆತ್ಮಹತ್ಯೆ ಅಲ್ಲ. ಆತನನ್ನು ಕೊಲೆ ಮಾಡಲಾಗಿದೆ. ಲಾಕ್ರ ಕೂಡಾ ಕೊಲೆಯಲ್ಲಿ ಭಾಗಿಯಾಗಿದ್ದಾರೆ‘ ಎಂದು ಆರೋಪಿಸಿದ್ದಾರೆ.
‘ಈ ಹಿಂದೆ ಡಿಎಸ್ಪಿಯಾಗಿಯೂ ಕೆಲಸ ಮಾಡಿದ್ದ ಲಾಕ್ರ ಪ್ರಭಾವಿ ವ್ಯಕ್ತಿಯಾಗಿರುವುದರಿಂದ ಪೊಲೀಸರು ಪ್ರಕರಣ ಮುಚ್ಚಿಹಾಕಿದ್ದಾರೆ. ಎಫ್ಐಆರ್ ದಾಖಲಿಸಲು ಕಳೆದ ನಾಲ್ಕು ತಿಂಗಳುಗಳಿಂದ ಪ್ರಯತ್ನಿಸುತ್ತಿದ್ದೇನೆ. ಆದರೆ ಪೊಲೀಸರು ನನ್ನ ನೆರವಿಗೆ ಬರದ ಕಾರಣ ಮಾಧ್ಯಮಗಳ ಮುಂದೆ ಬಂದಿದ್ದೇನೆ’ ಎಂದಿದ್ದಾರೆ.
‘ನನ್ನ ಮಗನಿಗೆ ನ್ಯಾಯ ದೊರೆಯಬೇಕು. ಆರೋಪಿಗಳನ್ನು ರಕ್ಷಿಸಲು ಪ್ರಯತ್ನಿಸುತ್ತಿರುವ ಒಡಿಶಾ ಪೊಲೀಸರ ಮೇಲೆ ನನಗೆ ವಿಶ್ವಾಸವಿಲ್ಲ. ಪ್ರಕರಣದ ಬಗ್ಗೆ ಸ್ವತಂತ್ರ ತನಿಖೆ ನಡೆಯಬೇಕು’ ಎಂದು ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹಾಕಿ ತಂಡದ ಶಿಬಿರದಲ್ಲಿ ಪಾಲ್ಗೊಂಡಿರುವ ಲಾಕ್ರ, ಈ ಆರೋಪದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.