ಭುವನೇಶ್ವರ: ದೇಶದ ಕಲಾ ಸಾಂಸ್ಕೃತಿಕ ವೈಭವ ಮೇಳೈಸಿದ ಕಾರ್ಯಕ್ರಮಗಳು ಹಾಕಿ ವಿಶ್ವಕಪ್ ಉದ್ಘಾಟನಾ ಸಮಾರಂಭಕ್ಕೆ ಮೆರುಗು ತುಂಬಿದವು. ಕಳಿಂಗ ಕ್ರೀಡಾಂಗಣದಲ್ಲಿ ಮಂಗಳವಾರ ಸಂಜೆ ಆರಂಭಗೊಂಡ ಸಮಾರಂಭ ಒಂದೂವರೆ ತಾಸಿಗೂ ಹೆಚ್ಚು ಕಾಲ ಕಲಾ ಆಸ್ವಾದಕರ ಮನಕ್ಕೆ ಮುದ ನೀಡಿತು.
ಆರಂಭದಲ್ಲಿ ವಿಶ್ವ ಹಾಕಿ ಫೆಡರೇಷನ್ ಅಧ್ಯಕ್ಷ ನರೀಂದರ್ ಬಾತ್ರಾ ಮತ್ತು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಎಲ್ಲ ತಂಡಗಳ ಆಟಗಾರರಿಗೆ ಶುಭ ಹಾರೈಸಿದರು. ನಂತರ ನಟ ಶಾರೂಕ್ ಖಾನ್ ವೇದಿಕೆ ಏರಿ ಆಟಗಾರರನ್ನು ಹುರಿದುಂಬಿಸಿದರು. ಹಾಕಿ ಮತ್ತು ಕ್ರೀಡೆಯ ಬಗ್ಗೆ ಪ್ರಶಂಸೆಯ ಮಾತುಗಳನ್ನು ಆಡಿದರು.
ನಂತರ ಭಾರತ ಮತ್ತು ಒಡಿಶಾದ ಸಾಂಸ್ಕೃತಿಕ ವೈಭವಕ್ಕೆ ವೇದಿಕೆ ಸಾಕ್ಷಿ ಯಾಯಿತು. ಸಂಗೀತ, ನೃತ್ಯ ಮುದ ನೀಡಿತು. ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಅವರ ನೃತ್ಯದ ಜೊತೆಯಲ್ಲಿ ವಿವಿಧ ಬಗೆಯ ನಾಟ್ಯ ಪ್ರಕಾರಗಳನ್ನು ಪರಿಚಯಿಸಲಾಯಿತು.
ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಮತ್ತು ಜೋನಿತಾ ಗಾಂಧಿ ಹಾಡಿ ರಂಜಿಸಿದರು.