ಕೋಲ್ಕತ್ತ: ನಿರಂತರ ನಾಲ್ಕು ಸೋಲಿನೊಂದಿಗೆ ಕಂಗಾಲಾಗಿದ್ದ ಹಾಲಿ ಚಾಂಪಿಯನ್ ಚೆನ್ನೈಯಿನ್ ಎಫ್ಸಿ ತಂಡದ ಜಯದ ಖಾತೆ ತೆರೆಯುವ ಕನಸು ನನಸಾಗಲಿಲ್ಲ.
ಇಲ್ಲಿನ ವಿವೇಕಾನಂದ ಯುವ ಭಾರತಿ ಕ್ರಿಡಾಂಗಣದಲ್ಲಿ ತವರಿನ ಪ್ರೇಕ್ಷಕರನ್ನು ರಂಜಿಸಿದ ಎಟಿಕೆ ತಂಡ ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಫುಟ್ಬಾಲ್ನ ಪಂದ್ಯದಲ್ಲಿ 2–1ರಿಂದ ಗೆದ್ದರು.
ಮೂರನೇ ನಿಮಿಷದಲ್ಲಿ ಕಲು ಉಚೆ ಗೋಲು ಗಳಿಸಿ ಎಟಿಕೆಗೆ ಮುನ್ನಡೆ ತಂದುಕೊಟ್ಟರು. 10 ನಿಮಿಷಗಳ ನಂತರ ಜಾನ್ ಜಾನ್ಸನ್ ತಂಡದ ಮುನ್ನಡೆಯನ್ನು ಹೆಚ್ಚಿಸಿದರು. 17ನೇ ನಿಮಿಷದಲ್ಲಿ ಕಾರ್ಲೋಸ್ ಸಲೋಮ್ ಚೆನ್ನೈಯಿನ್ ಪರ ಚೆಂಡನ್ನು ಗುರಿ ಮುಟ್ಟಿಸಿದರು.
ದ್ವಿತೀಯಾರ್ಧದಲ್ಲಿ ಎರಡೂ ತಂಡಗಳು ಜಿದ್ದಾಜಿದ್ದಿಯ ಕಾದಾಟ ನಡೆಸಿದವು. ಆದರೆ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಚೆನ್ನೈಯಿನ್ ತಂಡದ ಆಸೆ ಕಮರಿತು.