ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾವನಿಗ್‌ ವೋಟ್ಹಾಕೋದೋ ಗೊತ್ತಾಗ್ತಾ ಇಲ್ಲ...

Last Updated 4 ಮೇ 2018, 12:25 IST
ಅಕ್ಷರ ಗಾತ್ರ

ಕರ್ನಾಟಕ ವಿಧಾನಸಭಾ ಚುನಾವಣೆಯ ಬಿಸಿಯೂ, ರಣರಣ ಬಿಸಿಲೂ ಒಟ್ಟೊಟ್ಟಿಗೇ ಸೇರಿಕೊಂಡು ಜನರ ಮೇಲೆ ಮುಗಿಬಿದ್ದಿವೆ. ಬಿಸಿಲಿಂದ ತಪ್ಪಿಸಿಕೊಂಡು ನೆರಳು ಹುಡುಕಿಕೊಳ್ಳಬಹುದು, ಆದರೆ ಚುನಾವಣಾ ಬೇಗೆಯಿಂದ ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ. ವಾಟ್ಸ್‌ಆ್ಯಪ್, ಫೇಸ್‌ಬುಕ್, ಟ್ವಿಟರ್, ಪತ್ರಿಕೆಗಳು, ವಾಹಿನಿಗಳು, ರಸ್ತೆ, ಸಭೆ ಸಮಾರಂಭಗಳನ್ನೆಲ್ಲ ಬಣ್ಣಬಣ್ಣದ ಭರವಸೆಗಳು ಮತ್ತು ವಿರೋಧಿಗಳ ಹಿಗ್ಗಾಮುಗ್ಗಾ ಟೀಕೆಗಳಿಂದಲೇ ತುಂಬಿಹೋಗಿವೆ. ಈ ಗದ್ದಲದಲ್ಲಿ ಯಾವ ಮುಖ ಪ್ರಾಮಾಣಿಕವಾದದ್ದು, ಪ್ರಾಮಾಣಿಕತೆಯ ಮುಖವಾಡದಲ್ಲಿ ಅಡಗಿರುವ ದೂರ್ತ ಯಾರು ಎಂಬುದು ತಿಳಿಯದೆ ಮತದಾರ ಕಂಗಾಲಾದಂತಿದೆ.

ಮತದಾರನ ಈ ಗೊಂದಲಕ್ಕೇ ಅಕ್ಷರರೂಪ ಕೊಟ್ಟು ಹಾಡು ಕಟ್ಟಿದ್ದಾರೆ ನಿರ್ದೇಶಕ ಯೋಗರಾಜ ಭಟ್ಟರು. ಇತ್ತೀಚೆಗೆ ಅವರು ಚುನಾವಣಾ ಆಯೋಗಕ್ಕಾಗಿ ಮತದಾನ ಜಾಗೃತಿ ಹಾಡೊಂದನ್ನು ರೂಪಿಸಿಕೊಟ್ಟಿದ್ದರು. ಇದೀಗ ಇನ್ನೊಂದು ಹೆಜ್ಜೆ ಮುಂದಕ್ಕೆ ಹೋಗಿ ತಮ್ಮ ಹೊಸ ಸಿನಿಮಾ ‘ಪಂಚತಂತ್ರ’ದಲ್ಲಿನ ಹಾಡೊಂದರ ಟ್ಯೂನ್‌ಗೆ ಮತದಾರನ ಗೊಂದಲವನ್ನೂ, ಮತದಾನದ ಮಹತ್ವವನ್ನೂ ಸಾರುವ ಸಾಲುಗಳನ್ನು ಪೋಣಿಸುತ್ತಾ ಹೋಗಿದ್ದಾರೆ.

‘ತಂತ್ರ ಕುತಂತ್ರ ಪಂಚತಂತ್ರ ಎಲ್ಲಾ ಮಿಕ್ಸು’ ಮಾಡಿಕೊಂಡು ‘ನಾವ್ ಬಿಟ್ರೂ ನಮ್ಮನ್ನು ಬಿಡದ ಪಾಲಿಟಿಕ್ಸ್‌’ನ ಸಂತಸ– ಸಂಕಷ್ಟಗಳನ್ನು ವಿಡಂಬನಾತ್ಮಕವಾಗಿ ಹೇಳುವ ಪ್ರಯತ್ನವಿದು. ‘ಎಲ್ಲ ಪಕ್ಷಗಳಲ್ಲಿಯೂ ಭ್ರಷ್ಟರಿದ್ದಾರೆ. ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬರಬಹುದು ಎಂದು ಹೇಳಲಾಗುತ್ತಿದೆ. ಈ ಎಲ್ಲ ಅಂಶಗಳನ್ನೂ ಇಟ್ಟುಕೊಂಡು ತಮಾಷೆಯಾಗಿ ಪದ್ಯ ಬರೆದಿದ್ದೇನೆ. ಕೊನೆಗೂ ಮತದಾನದ ಮಹತ್ವವನ್ನು ಸಾರುವುದೇ ಈ ಹಾಡಿನ ಉದ್ದೇಶ’ ಎನ್ನುವುವು ಭಟ್ಟರ ಉವಾಚ. ಸಂಗೀತ ಸಂಯೋಜಿಸುವುದರ ಜತೆಗೆ ಹರಿಕೃಷ್ಣ ಹಾಡಿದ್ದಾರೆ.

‘ಯಾವನಿಗ್‌ ವೋಟ್ಹಾಕೋದೋ ಗೊತ್ತಾಗ್ತಾ ಇಲ್ಲ; ಹಂಗಂತ ಸುಮ್ನೆ ಕುಂತ್ರೆ ತಪ್ಪಾಗ್ತದಲ್ಲಾ’ ಎಂದೇ ಶುರುವಾಗುವ ಹಾಡು ಪ್ರಸ್ತುತ ರಾಜಕೀಯ ಪರಿಸ್ಥಿತಿಗೆ ವ್ಯಂಗ್ಯದ ಮೊನೆಯಲ್ಲಿಯೇ ಚುಚ್ಚುವ ಪ್ರಯತ್ನ ಮಾಡಿದ್ದಾರೆ. ಹಾಡಿನ ಮಧ್ಯ ತಮ್ಮ ಸಿನಿಮಾ ‘ಪಂಚತಂತ್ರ’ ಹೆಸರನ್ನೂ ಸೇರಿಸಿದ್ದಾರೆ.

ಹಾಡಿನ ಸಾಹಿತ್ಯ ಇಲ್ಲಿದೆ. ಭಟ್ಟರ ಪದನರ್ತನವನ್ನು ನೀವೇ ನೋಡಿ... ಕೇಳಿ...

ರಚನೆ: ಯೋಗರಾಜ ಭಟ್

ಸಂಗೀತ: ಹರಿಕೃಷ್ಣ

ಯಾವನಿಗ್‌ ವೋಟ್ಹಾಕೋದೋ ಗೊತ್ತಾಗ್ತಾ ಇಲ್ಲ

ಹಂಗಂತ ಸುಮ್ನೆ ಕುಂತ್ರೆ ತಪ್ಪಾಗ್ತದಲ್ಲ...

ಯಾರನ್ನ ಕಂಡ್ರು ನಮ್ಗೆ ಸೆಟ್ಟಾಗ್ತಾ ಇಲ್ಲ...

ಹಾಳೂರಿಗುಳಿದವ್ನ್‌ ಯಾರೋ ಗೊತ್ತಾಗ್ತ ಇಲ್ಲ

ಕಾಂಪಿಟೇಶನ್ನಲ್ಲಿ ಹೇಳ್ತಾರೆ ಸುಳ್ಳನ್ನ

ಕಾಪಾಡ್ತಾರಾ ಇವ್ರು ನಿಜವಾಗ್ಲು ನಮ್ಮನ್ನ

ಐದು ವರ್ಷಕ್ಕೊಮ್ಮೆ ಮನೆಗೇ ಬರ್ತಾರಣ್ಣ

ಇರೊದೊಂದೇ ಕುರ್ಚಿ ಯಾರಂಡಿಗ್ಹಾಕಾಣ?

ಮೂರ‍್ನಾಲ್ಕು ಮಂದೀಗೆ ಕುರ್ಚಿ ಸಾಲೋದಿಲ್ಲ

ಕಾರ್ಪೆಂಟ್ರಿಗ್ಹೇಳ್ಬುಟ್ಟು ಮಂಚ ಮಾಡಿಸೋಣ...

ಈ ಜಾತಿ ಆ ಜಾತಿ

ಈ ಧರ್ಮ ಆ ಧರ್ಮ

ಈ ಪೈಕಿ ಆ ಪೈಕಿ ವೋಟು...

ಎಲ್ರು ಒಳ್ಳೇವ್ರಪ್ಪ

ಕೆಟ್ಟವ್ರು ಯಾರಿಲ್ಲ

ಅವ್ರವ್ರಿಗವ್ರವ್ರೇ ಗ್ರೇಟು

ಇವ್ನು ಅವ್ನು ಸೇರಿ

ಫುಲ್ಲು ಹಲ್ಕಿರ್ಕೊಂಡು

ಮಾಡ್ಕತಾವ್ರೆ ಬೈಟು ಸೀಟು

ಒಟ್ಟು ಬಡಿದಾಡ್ತವ್ರೆ

ಗಟ್ಟಿ ಹಿಡ್ಕಂಡವ್ರೆ

ಒಬ್ರು ಇನ್ನೊಬ್ಬರ ಜುಟ್ಟು

ವೋಟು ಕೊಟ್ಟ ಮೇಲೆ ನಾವೇನು ಮಾಡಾಣ?

ಯಾರು ಮೂಸೋದಿಲ್ಲ ಐದೊರ್ಸ ನಮ್ಮನ್ನ’

ಕೆಲಸ ಮಾಡ್ತಾನಂತ ನಂಬಿದ್ರೆ ಒಬ್ಬನ್ನ

ಅವ್ನೆ ಕೈಲಿಡ್ತಾನೆ ತೆಂಗಿನ್ಕಾಯಿ ಚಿಪ್ಪನ್ನ

ದೇವ್ರು ಕಾಪಾಡ್ತಾನೆ ಅಂತ ಅಂದ್ಕಬಾರ್ದು

ಅವ್ನು ಸೇರ್ಕೊಂಬಿಟ್ಟ ಇಲ್ಯಾವ್ದೋ ಪಾರ್ಟೀನ

ಶತಮಾನದಿಂದಾನು

ಮತದಾರನಾ ಗೋಳು

ಕೇಳಿಲ್ಲ ಯಾವ್ದೆ ಲೀಡರ‍್ರು

ನಾವ್ ನಾವೇ ಬೈಕಂಡು

ನಾವ್‌ ನಾವೇ ಒರೆಸೋಣ

ನಮ್ ನಮ್ಮ ಕಂಗಳ ನೀರು

ರಾಜಂಗೆ ತಕ್ಕಂಗೆ

ಪ್ರಜೆಯು ಇರ್ತಾನಂತೆ

ಮರ್ತೋಯ್ತು ಹೇಳಿದ್ದು ಯಾರು

ನಮಗೆ ತಕ್ಕ ರಾಜ

ಯಾವತ್ತೋ ಸಿಗುತಾನೆ

ಅಲ್ಲೀಗಂಟ ಇರಲಿ ಉಸ್ರು...

ಮೂರು ಬಿಟ್ಟವ್ರಂತ ನಮಗೇ ಬೈಕೊಳ್ಳೋಣ

ದೊಡ್ಡೋರಿಗಂದರೆ ಗುಮ್ತಾರೆ ಕಣಣ್ಣ...

ಬನ್ನಿ ಒಗ್ಗಟ್ಟನ್ನು ವರ್ಕೌಟು ಮಾಡೋಣ

ನಮ್ಮ ನಾಳೆಗಳಿಗೆ ನಾವೇ ಒದ್ದಾಡೋಣ

ಸದ್ಯಕ್ಕೆ ಫೈನಲ್ಲು ಎಲ್ರೂ ವೋಟಾಕೋಣ

ನೆಕ್ಸ್ಟು ಚುನಾವಣೆಗೆ ನಾವೇ ನಿಂತ್ಕಳ್ಳೋಣ

</p></p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT