ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆದ್ದ ಮೇಲೆ ದೇವಸ್ಥಾನಕ್ಕೆ ಗಂಟೆ ಕೊಡ್ಸೀ ಸ್ವಾಮಿ...!

ಕಡೂರಿನ ಹಿರಿಯ ಗುತ್ತಿಗೆದಾರ ಡಿ.ಕೃಷ್ಣಮೂರ್ತಿ ನೆನಪು
Last Updated 9 ಏಪ್ರಿಲ್ 2018, 7:16 IST
ಅಕ್ಷರ ಗಾತ್ರ

ಕಡೂರು: ‘ಆಗೆಲ್ಲ ಹಣಕ್ಕೆ ಬೆಲೆಯಿರಲಿಲ್ಲ. ಗುಣಕ್ಕೆ ಬೆಲೆ ಇತ್ತು. ಗ್ರಾಮೀಣ ಭಾಗದ ಜನ ತಾವೇ ಹಣ ಕೂಡಿಸಿ ಎಲೆ ಅಡಿಕೆ ಇಟ್ಟು ತಮ್ಮ ಆಯ್ಕೆಯ ಅಭ್ಯರ್ಥಿಗೆ ನೀಡಿ ನಮ್ಮ ಮತ ನಿಮಗೆ ಎಂದು ಮಾತು ಕೊಡುತ್ತಿದ್ದರು. ಪ್ರತಿಫಲವಾಗಿ ನೀವು ಗೆದ್ದ ನಂತರ ನಮ್ಮೂರಿನ ದೇವಸ್ಥಾನಕ್ಕೆ ಒಂದು ಗಂಟೆ ಕೊಡಿಸಿ ಎಂದು ಬೇಡಿಕೆ ಇಡುತ್ತಿದ್ದರು...! ಕಡೂರಿನ ಹಿರಿಯ ಗುತ್ತಿಗೆದಾರ ಡಿ.ಕೃಷ್ಣಮೂರ್ತಿ ಅವರು 1967ರ ಚುನಾ ವಣೆಯ ನೆನಪು ಬಿಚ್ಚಿಟ್ಟದ್ದು ಹೀಗೆ.

1967ರಲ್ಲಿ 4ನೇ ವಿಧಾನಸಭಾ ಚುನಾವಣೆಗೆ ಕಡೂರಿನಿಂದ ಪ್ರಜಾಸೋಶಿಯಲಿಸ್ಟ್ ಪಕ್ಷದಿಂದ ಸ್ಪರ್ಧಿಸಿದ್ದ  ಕೆ.ಎಂ.ತಮ್ಮಯ್ಯನವರ ಪರವಾಗಿ ಓಡಾಡಿದವರಲ್ಲಿ ಡಿ.ಕೃಷ್ಣಮೂರ್ತಿ ಸಹ ಒಬ್ಬರು. ಅವರ ಜತೆ ಕಡೂರಿನ ಎನ್.ಡಿ.ದುರ್ಗೋಜಿರಾವ್, ಖಂಡೋಜಿರಾಯರು, ಡಿ.ಸಿ.ಶ್ರೀನಿವಾಸ್, ವೆಂಕಟಸ್ವಾಮಯ್ಯ ಇದ್ದರು.

‘ತಮ್ಮಯ್ಯನವರ ವಿರುದ್ಧ ಕಾಂಗ್ರೆಸ್‌ನಿಂದ ವೈ.ಎಂ.ಗಂಗಾಧರಪ್ಪ ಸ್ಪರ್ಧಿಸಿದ್ದರು. ಗ್ರಾಮೀಣ ಭಾಗದಲ್ಲಿ ತಮ್ಮಯ್ಯನವರ ಆತ್ಮೀಯರು ಮತ ಪ್ರಚಾರಕ್ಕೆ ಹೋದಾಗ ಆ ಗ್ರಾಮದ ಜನರು ಅಲ್ಲಿನ ದೇಗುಲದ ಕಟ್ಟೆ ಅಥವಾ ಅರಳೀಕಟ್ಟೆಯ ಮೇಲೆ ಸೇರುತ್ತಿದ್ದರು. ಇವರು ನಮ್ಮ ತಮ್ಮಯ್ಯ ಎಲೆಕ್ಷನ್‌ಗೆ ನಿಂತಿದ್ದಾರೆ...ಏನ್‌ ಮಾಡ್ತೀರಪ್ಪಾ ಎಂದು ಕೇಳುತ್ತಿದ್ದರು. ಆ ಗ್ರಾಮದ ಹಿರಿಯರು ತಮ್ಮ ತಮ್ಮಲ್ಲೇ ಚರ್ಚಿಸಿ ತಮ್ಮ ಕೈಲಾದಷ್ಟು ಹಣ -ಪ್ರತಿಯೊಬ್ಬರೂ ₹1ರಿಂದ 5ರ ತನಕ ಒಟ್ಟುಗೂಡಿಸಿ ಎಲೆಕ್ಷನ್ ಖರ್ಚಿಗೆ ಎಂದು ಎಲೆ ಅಡಿಕೆ ಇಟ್ಟು ಕೊಡುತ್ತಿದ್ದರು. ಜತೆಗೆ ನಾವೆಲ್ಲ ತಮ್ಮಯ್ಯನವರಿಗೆ ಓಟ್ ಹಾಕ್ತೀವಿ..ಅವರು ಗೆದ್ದ ಮೇಲೆ ನಮ್ಮೂರಿನ ಗುಡಿಗೊಂದು ಗಂಟೆ ಹಾಕಿಸ್ಲಿ ಎಂಬ ಕನಿಷ್ಠ ಬೇಡಿಕೆ ಇಡುತ್ತಿದ್ದರು’ ಎಂದು ನೆನಪಿಸಿಕೊಂಡರು.

ಆ ಚುನಾವಣೆಯಲ್ಲಿ ತಮ್ಮಯ್ಯನವರ ಎಲೆಕ್ಷನ್ ಖರ್ಚು ₹26 ಸಾವಿರ, ಅದರಲ್ಲಿಯೂ ₹650 ಉಳಿದಿತ್ತು. ತಮ್ಮಯ್ಯನವರು ಚುನಾವಣೆಯಲ್ಲಿ ತಮ್ಮ ಪರವಾಗಿ ಓಡಾಡಿದ ವಾಹನಗಳ ಡ್ರೈವರ್‍ ಗ‍ಳಿಗೆ ಬಟ್ಟೆ ಕೊಡಿಸಿ ತಾವೂ ಒಂದು ಸೂಟ್ ಹೊಲಿಸಿಕೊಂಡರು. ‍ಅಷ್ಟಾದರೂ ಇನ್ನೂ ಸ್ವಲ್ಪ ಹಣ ಉಳಿದಿತ್ತು. ಅದನ್ನು ಅಸೆಂಬ್ಲಿಗೆ ಹೋಗಲು ಬಸ್ ಚಾರ್ಜ್‌ಗೆಂದು ಬಳಸಿದ್ದರು.

‘ಆ ಚುನಾವಣೆಯುಲ್ಲಿ ತಮ್ಮಯ್ಯನವರು 18,663 ಮತಗಳನ್ನು ಪಡೆದಿದ್ದು, ಅವರ ಎದುರಾಳಿ ಗಂಗಾಧರಪ್ಪ 12,823 ಮತಗಳನ್ನು ಪಡೆದರು. ತಮ್ಮಯ್ಯನವರು ಬಿಎ, ಎಲ್.ಎಲ್.ಬಿ. ಪದವೀಧರರು. ಜನರು ಸಹ ತಮ್ಮ ಶಾಸಕನನ್ನು ಜಾತಿ ಅಥವ ಹಣ ಬಲ ನೋಡಿ ಆರಿಸುತ್ತಿರಲಿಲ್ಲ. ಅಭ್ಯರ್ಥಿಗಳು ಎದುರಾಳಿಗಳ ತೇಜೋವಧೆಗೆ ಮುಂದಾಗುತ್ತಿರಲಿಲ್ಲ. ದೂಷಣೆ ಮಾಡುತ್ತಿರಲಿಲ್ಲ. ಪರಸ್ಪರ ಗೌರವ ಕೊಡುತ್ತಿದ್ದರು. ವ್ಯಕ್ತಿಯ ಪ್ರಾಮಾಣಿಕತೆ ಮತ್ತು ಕಾರ್ಯದಕ್ಷತೆ ನೋಡಿ ಮತ ಹಾಕುತ್ತಿದ್ದರು. ಪಕ್ಷಕ್ಕಿಂತ ವ್ಯಕ್ತಿಯ ವೈಯುಕ್ತಿಕ ವರ್ಚಸ್ಸು ದೊಡ್ಡದಾಗುತ್ತಿತ್ತು. ಜನರೂ ಅಷ್ಟೆ. ಒಮ್ಮೆ ಒಬ್ಬರಿಗೆ ಮಾತು ಕೊಟ್ಟರೆ ಹಿಂತೆಗೆಯುತ್ತಿರಲಿಲ್ಲ. ಆಗ ಚುನಾವಣೆ ನಡೆಯುತ್ತಿದ್ದುದು ವ್ಯಕ್ತಿ ಕೇಂದ್ರೀಕೃತವಾಗಿ. ಹಣ ಮತ್ತು ಹೆಂಡ ಎರಡೂ ಇರಲಿಲ್ಲ. ಈಗಿನ ಚುನಾವಣೆಗಳನ್ನು ನೋಡಿದರೆ ಹಿಂದಿನ ನೆನಪುಗಳು ಮಧುರ ಭಾವನೆಗಳನ್ನು ಮೆಲುಕು ಹಾಕುತ್ತದೆ’ ಎಂದು  ಡಿ.ಕೃಷ್ಣಮೂರ್ತಿ ನೆನಪಿಸಿಕೊಳ್ಳುತ್ತಾರೆ

(ಇದೇ ತಮ್ಮಯ್ಯನವರು ಮುಂದೆ 1978 ರಲ್ಲಿ ಮತ್ತೆ ಜನತಾಪಕ್ಷದಿಂದ ಸ್ಪರ್ಧಿಸಿ ಮತ್ತೆ ಕಡೂರು ಶಾಸಕರಾಗಿದ್ದರು).

ಬಾಲುಮಚ್ಚೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT