ಹುಬ್ಬಳ್ಳಿ: ನಗರದ ಮೂರುಸಾವಿರ ಮಠದ ಎಸ್.ಜಿ.ಎಂ.ವಿ.ಎಸ್ ಮಹಿಳಾ ಕಾಲೇಜು ತಂಡ, ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಸುವರ್ಣ ಕರ್ನಾಟಕ ಪಿ.ಯು. ಮಹಾವಿದ್ಯಾಲಯದ ಜಂಟಿ ಆಶ್ರಯದಲ್ಲಿ ನಡೆದ ಹುಬ್ಬಳ್ಳಿ ತಾಲ್ಲೂಕು ಮಟ್ಟದ ಕಬಡ್ಡಿ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿತು.
ಫೈನಲ್ ಪಂದ್ಯದಲ್ಲಿ ಎಸ್.ಜಿ.ಎಂ.ವಿ.ಎಸ್ ಕಾಲೇಜು 15–6 ಅಂಕಗಳಿಂದ ವಿಶ್ವಭಾರತಿ ಕಾಲೇಜು ತಂಡವನ್ನು ಮಣಿಸಿತು. ಸೆಮಿಫೈನಲ್ ಪಂದ್ಯಗಳಲ್ಲಿ ವಿಶ್ವಭಾರತಿ ಕಾಲೇಜು 12–8ರಲ್ಲಿ ಚಿನ್ಮಯ ಮೇಲೂ, ಎಸ್.ಜಿ.ಎಂ.ವಿ.ಎಸ್ 15–6ರಲ್ಲಿ ವಿಶ್ವಭಾರತಿ ಕಾಲೇಜು ತಂಡವನ್ನು ಸೋಲಿಸಿದ್ದವು.
ಬಾಲಕರ ವಿಭಾಗದಲ್ಲಿ ನೆಹರೂ, ಚಿನ್ಮಯ, ಜ್ಞಾನದ, ರತ್ನಪಾಲ ಶೆಟ್ಟಿ, ವಿದ್ಯಾಭಾರತಿ, ಫಾತೀಮಾ, ಆಕ್ಸ್ಫರ್ಡ್ ಮತ್ತು ಕನಕದಾಸ ಕಾಲೇಜಿನ ತಂಡಗಳು ಕ್ವಾರ್ಟರ್ ಫೈನಲ್ ತಲುಪಿವೆ. ನಾಕೌಟ್ ಹಂತದ ಪಂದ್ಯಗಳು ಭಾನುವಾರ ನಡೆಯಲಿವೆ.
ಸುವರ್ಣ ಕರ್ನಾಟಕ ವಿದ್ಯಾಸಂಸ್ಥೆ ಅಧ್ಯಕ್ಷ ಎನ್.ಎಚ್. ಕೋನರಡ್ಡಿ ಟೂರ್ನಿಗೆ ಚಾಲನೆ ನೀಡಿದರು. ಪದವಿಪೂರ್ವ ಶಿಕ್ಷಣ ಇಲಾಖೆಯ ಕ್ರೀಡಾ ಸಂಯೋಜಕ ಯು.ಎನ್. ಹಜಾರೆ, ಕಾಲೇಜಿನ ಪ್ರಾಚಾರ್ಯ ಎಸ್.ಜಿ. ಕೊಣ್ಣೂರ ಇದ್ದರು.