ಬೆಂಗಳೂರು: ಅಂತರರಾಷ್ಟ್ರೀಯ ಮಟ್ಟದ ಕಬಡ್ಡಿ ಆಟಗಾರ ಸಂದೀಪ್ ಸಿಂಗ್ ನಂಗಲ್ ಅವರನ್ನು ಟೂರ್ನಿಯೊಂದರ ಸಂದರ್ಭದಲ್ಲಿ ಅಪರಿಚಿತರ ಗುಂಪೊಂದು ಗುಂಡಿಕ್ಕಿ ಕೊಲೆ ಮಾಡಿದೆ. ಪಂಜಾಬ್ನ ಜಲಂಧರ್ ಜಿಲ್ಲೆಯ ನಾಕೋದಾರ್ನ ಮಲಿಯನ್ ಖುರ್ದ್ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ನೂರಾರು ಜನರು ಸೇರಿದ್ದ ಮೈದಾನವೊಂದರಲ್ಲಿ ಪಂದ್ಯ ನಡೆಯುತ್ತಿದ್ದಾಗ ಸಂಜೆ ವೇಳೆ ಗುಂಡಿನ ದಾಳಿ ನಡೆದಿದೆ. ಇದರ ವಿಡಿಯೊ ವೈರಲ್ ಆಗಿದೆ. ಮರಗಳು ಮತ್ತು ವಾಹನಗಳ ಎಡೆಯಲ್ಲಿ ನಿಂತ ಹಂತಕರು ಸಂದೀಪ್ ಅವರತ್ತ ಗುಂಡಿನ ಮಳೆಗರೆದಿದ್ದಾರೆ. ಅದರ ಪೈಕಿ ಎಂಟು ಗುಂಡುಗಳು ಅವರ ಹಣೆ ಮತ್ತು ತೋಳಿಗೆ ತಾಗಿವೆ.
ಗಂಭೀರ ಗಾಯಗೊಂಡ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಅಲ್ಲಿ ತಲುಪುವಷ್ಟರಲ್ಲಿ ಅವರು ಕೊನೆಯುಸಿರೆಳಿದಿದ್ದಾರೆ. ಹಂತಕರು ನಾಲ್ಕರಿಂದ ಐದು ಮಂದಿ ಇದ್ದರು ಎಂದು ಶಂಕಿಸಲಾಗಿದೆ.