ಮೈಸೂರು: ರಾಷ್ಟ್ರೀಯ ಬಾಕ್ಸಿಂಗ್ ತಂಡದ ಮುಖ್ಯ ಕೋಚ್ ಚೇನಂಡ ಅಚ್ಚಯ್ಯ ಕುಟ್ಟಪ್ಪ ಅವರು ಕ್ರೀಡಾ ವಿಭಾಗದಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕೊಡಗು ಜಿಲ್ಲೆ ವಿರಾಜಪೇಟೆಯ ಅವರು ಮೈಸೂರಿನ ಗೋಕುಲಂ ನಿವಾಸಿ. ಪುಣೆಯಲ್ಲಿ ಸುಬೇದಾರ್ ಆಗಿ ಸೇವೆ ಸಲ್ಲಿಸುತ್ತಿರುವ ಅವರಿಗೆ ಈಚೆಗೆ ದ್ರೋಣಾಚಾರ್ಯ ಪುರಸ್ಕಾರ ಒಲಿದಿತ್ತು.
ಪಟಿಯಾಲದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್ನಲ್ಲಿ (ಎನ್ಐಎಸ್) ಕೋಚಿಂಗ್ ಡಿಪ್ಲೊಮಾ ಪಡೆದಿದ್ದು, 2007ರಿಂದ ರಾಷ್ಟ್ರೀಯ ತಂಡದ ಜೊತೆ ಇದ್ದಾರೆ. ಬ್ರೆಜಿಲ್ನ ರಿಯೊ ಡಿ ಜನೈರೊದಲ್ಲಿ 2016ರಲ್ಲಿ ನಡೆದಿದ್ದ ಒಲಿಂಪಿಕ್ಸ್ನಲ್ಲಿ ಸಹಾಯಕ ಕೋಚ್ ಆಗಿ ಭಾಗವಹಿಸಿದ್ದರು.
‘ಖುಷಿಯ ಜೊತೆಗೆ ಮತ್ತಷ್ಟು ಜವಾಬ್ದಾರಿ ಹೆಚ್ಚಿಸಿದೆ. ಕೇಂದ್ರ ಸರ್ಕಾರದ ಹಲವಾರು ಪ್ರಶಸ್ತಿಗಳು ಲಭಿಸಿವೆ. ಆದರೆ, ತವರು ರಾಜ್ಯ ನನ್ನ ಸಾಧನೆ ಗುರುತಿಸಿರುವುದು ಸಂತಸ ಉಂಟು ಮಾಡಿದೆ’ ಎಂದು ಕುಟ್ಟಪ್ಪ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.