ಬೆಂಗಳೂರು: ಕೆನರಾ ಬ್ಯಾಂಕ್ ತಂಡದವರು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಸ್ಮಾರಕ ರಾಜ್ಯಮಟ್ಟದ ಹಾಕಿ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಶಾಂತಿನಗರದಲ್ಲಿರುವ ಕಾರ್ಯಪ್ಪ ಹಾಕಿ ಅರೇನಾದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಕೆನರಾ ಬ್ಯಾಂಕ್ 3–1 ಗೋಲುಗಳಿಂದ ಹಾಕಿ ಕೂರ್ಗ್ ಜೂನಿಯರ್ಸ್ ತಂಡವನ್ನು ಮಣಿಸಿತು.
ವಿಜಯೀ ತಂಡದ ರೊನಾಲ್ಡ್ ಕಿರಣ್ (18 ನೇ ನಿಮಿಷ), ಕೃಷ್ಣ ರೆಡ್ಡಿ (40 ನೇ ನಿ.) ಮತ್ತು ಪ್ರಧಾನ್ ಸೋಮಣ್ಣ (44ನೇ ನಿ.) ತಲಾ ಒಮ್ಮೆ ಚೆಂಡನ್ನು ಗುರಿ ಮುಟ್ಟಿಸಿದರು.
ಹಾಕಿ ಕೂರ್ಗ್ ತಂಡದ ಗಗನ್ ಮೇದಪ್ಪ 49ನೇ ನಿಮಿಷದಲ್ಲಿ ಕೈಚಳಕ ತೋರಿದರು.
ಶುಕ್ರವಾರ ನಡೆಯುವ ಎಂಟರ ಘಟ್ಟದ ಹಣಾಹಣಿಯಲ್ಲಿ ಕೆನರಾ ಬ್ಯಾಂಕ್ ತಂಡಕ್ಕೆ ಡಿವೈಇಎಸ್ ಸವಾಲು ಎದುರಾಗಲಿದೆ.
ಇನ್ನೊಂದು ಪಂದ್ಯದಲ್ಲಿ ಡಿವೈಇಎಸ್ 1–0 ಗೋಲಿನಿಂದ ಎ.ಜಿ.ಒ.ಆರ್.ಸಿ ತಂಡವನ್ನು ಸೋಲಿಸಿತು. 23ನೇ ನಿಮಿಷದಲ್ಲಿ ಗೋಲು ಬಾರಿಸಿದ ಎನ್.ಕುಮಾರ್, ಗೆಲುವಿನ ರೂವಾರಿಯಾದರು.
ದಿನದ ಅಂತಿಮ ಹಣಾಹಣಿಯಲ್ಲಿ ಸಾಯ್ ತಂಡ 3–2 ಗೋಲುಗಳಿಂದ ಕೊಡವ ಸಮಾಜ ವಿರುದ್ಧ ಜಯಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿತು.
ಈ ತಂಡದ ಯತೀಶ್ ಕುಮಾರ್ (11), ವೀರಣ್ಣ ಗೌಡ (18) ಮತ್ತು ಹರೀಶ್ ಮುಟಗರ್ (58ನೇ ನಿಮಿಷ) ಅವರು ತಲಾ ಒಂದು ಗೋಲು ಹೊಡೆದರು. ಕೊಡವ ಸಮಾಜ ತಂಡದ ಸಿ.ಬಿ.ಪೂವಣ್ಣ (16ನೇ ನಿಮಿಷ) ಮತ್ತು ಎಂ.ಕೆ.ಚೇತನ್ (26 ನೇ ನಿ.) ತಲಾ ಒಂದು ಗೋಲು ದಾಖಲಿಸಿ ಸೋಲಿನ ನಡುವೆ ಗಮನ ಸೆಳೆದರು.
ಕ್ವಾರ್ಟರ್ ಫೈನಲ್ನಲ್ಲಿ ಸಾಯ್ ತಂಡ ಕೆ.ಎಸ್.ಪಿ. ವಿರುದ್ಧ ಸೆಣಸಲಿದೆ.
ಎಂಟರ ಘಟ್ಟದ ಇತರ ಪಂದ್ಯಗಳಲ್ಲಿ ಸದರ್ನ್ ಕಮಾಂಡ್ ಮತ್ತು ಎಎಸ್ಸಿ ಸೆಂಟರ್; ಎಂಇಜಿ ಬಾಯ್ಸ್ ಮತ್ತು ಆರ್.ಡಬ್ಲ್ಯು.ಎಫ್ ತಂಡಗಳು ಮುಖಾಮುಖಿಯಾಗಲಿವೆ.