ಮೈಸೂರು: ಪೈಲ್ವಾನ್ ರುದ್ರ ಉರುಫ್ ಮೂಗರವರ ಅಭಿಮಾನಿಗಳ ಬಳಗ ಮೈಸೂರು ಹಾಗೂ ಜಯಚಾಮರಾಜ ಒಡೆಯರ್ ಗರಡಿ ಸಂಘದಿಂದ ಜೂನ್ 12ರಂದು ಮಧ್ಯಾಹ್ನ 3 ಗಂಟೆಗೆ ದೊಡ್ಡಕೆರೆ ಮೈದಾನದ ಸಾಹುಕಾರ್ ಎಸ್.ಚನ್ನಯ್ಯ ಕುಸ್ತಿ ಅಖಾಡದಲ್ಲಿ ‘30 ಜೊತೆ ಕಾಟ ಕುಸ್ತಿ ಪಂದ್ಯಾವಳಿ’ ಆಯೋಜಿಸಲಾಗಿದೆ.
‘ರುದ್ರ ಉರುಫ್ ಮೂಗ, ನಟ ಪುನೀತ್ ರಾಜ್ಕುಮಾರ್ ಹಾಗೂ ಗೋಲ್ಡ್ ಮ್ಯಾನ್ ಟಿ.ಶ್ರೀನಿವಾಸ್ ಅವರ ಸ್ಮರಣಾರ್ಥ ಈ ಪಂದ್ಯಾವಳಿ ಆಯೋಜಿಸಲಾಗಿದೆ. ಪೈಲ್ವಾನ್ಗಳಾದ ಪಾಪಯ್ಯ, ಕೊಪ್ಪಲು ಬಸವಯ್ಯ ಹಾಗೂ ಎ.ಶಿವನಂಜಪ್ಪ ಅವರ ಹೆಸರಿನಲ್ಲಿ ಕಪ್ ನೀಡಲಾಗುತ್ತದೆ. ವಿಜೇತರಿಗೆ ನಗದು ಬಹುಮಾನವನ್ನೂ ನೀಡಲಾಗುತ್ತದೆ’ ಎಂದು ಪೈಲ್ವಾನ್ ಆರ್. ರಮೇಶ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಕುಸ್ತಿಗೆ ಸರ್ಕಾರದಿಂದ ಪ್ರೋತ್ಸಾಹ ಕಡಿಮೆ. ಕುಸ್ತಿಪಟುಗಳಿಗೆ ಯಾವುದೇ ಸೌಲಭ್ಯಗಳಿಲ್ಲ. ನಗರ ಪ್ರದೇಶಗಳಲ್ಲಿ ಯುವಕರು ಜಿಮ್ಗಳಿಗೆ ಆಕರ್ಷಿತರಾಗುತ್ತಿದ್ದು, ಕುಸ್ತಿ ಕ್ಷೀಣಿಸುತ್ತಿದೆ. ಆದರೆ, ಹಳ್ಳಿಗಳಲ್ಲಿ ಗರಡಿ ಮನೆಗಳು ಹೆಚ್ಚಾಗಿದ್ದು, ಕುಸ್ತಿಗೆ ಆದ್ಯತೆ ನೀಡುತ್ತಿದ್ದಾರೆ’ ಎಂದರು.
ಪೈಲ್ವಾನ್ ಆರ್.ಕೆ.ರವಿ ಮಾತನಾಡಿ, ‘ಪದ್ಯಾವಳಿಯಲ್ಲಿ ಆರು ಜೋಡಿಗಳ ಪಂದ್ಯ ರೋಚಕವಾಗಿರಲಿದೆ. ಅಂತರರಾಷ್ಟ್ರೀಯ ಕುಸ್ತಿಪಟುಗಳಾದ ದಾವಣಗೆರೆಯ ಪೈಲ್ವಾನ್ ಕಾರ್ತಿಕ್ ಕಾಟೆ ಹಾಗೂ ಪುಣೆಯ ಪೈಲ್ವಾನ್ ವಿಷ್ಣು ಕೋಶೆ ನಡುವಿನ ಪಂದ್ಯ ಮತ್ತಷ್ಟು ರೋಚಕವಾಗಿರಲಿದೆ’ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪೈಲ್ವಾನ್ಗಳಾದ ರಾಜಶೇಖರ್, ಕುಮಾರ್ ಇದ್ದರು.