ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಡ್ಡು ಬೇಡುವ ‘ಬಕಾಸುರ’

Last Updated 8 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಮಹಾಭಾರತದ ಪ್ರಕಾರ ಬಕಾಸುರ ಒಬ್ಬ ರಾಕ್ಷಸ. ಏಕಚಕ್ರ ನಗರದ ಬಳಿಯ ಬೆಟ್ಟದಲ್ಲಿ ಅವನ ವಾಸ. ದಿನವೊಂದಕ್ಕೆ ಅವನಿಗೆ ಒಂದು ಬಂಡಿ ಅನ್ನ ಬೇಕಿತ್ತಂತೆ. ಆದರೆ, ಗಾಂಧಿನಗರದ ಈ ‘ಬಕಾಸುರ’ನಿಗೆ ಹಣವೇ ಆಹಾರ!

ಒಳ್ಳೆಯ ವ್ಯಕ್ತಿಯೊಬ್ಬ ಹಣದ ಹಿಂದೆ ಬಿದ್ದರೆ ಏನೆಲ್ಲಾ ಅನಾಹುತವಾಗುತ್ತದೆ ಎಂಬುದೇ ‘ಬಕಾಸುರ’ ಚಿತ್ರದ ಕಥಾವಸ್ತು. ಹಾರರ್‌, ಕಾಮಿಡಿ ಮೂಲಕ ಇದನ್ನು ಹೇಳಲು ನಿರ್ದೇಶಕ ನವನೀತ್ ಮುಂದಾಗಿದ್ದಾರೆ.

‘ಕ್ರೇಜಿಸ್ಟಾರ್’ ರವಿಚಂದ್ರನ್ ಮೊದಲ ಬಾರಿಗೆ ಚಿತ್ರದಲ್ಲಿ ಖಳನಟನಾಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿ ಕರೆದಿತ್ತು.

‘ಎಲ್ಲರಿಗೂ ದುಡ್ಡು ಬೇಕು. ಒಳ್ಳೆಯವರು ಕೂಡ ದುಡ್ಡಿನ ಹಿಂದೆ ಬೀಳುತ್ತಾರೆ. ಆಗ ಏನಾಗುತ್ತದೆ ಎನ್ನುವುದು ಕುತೂಹಲ. ರವಿಚಂದ್ರನ್ ಅವರು ನೆಗೆಟಿವ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಅವರದ್ದು ಉದ್ದಿಮೆದಾರನ ಪಾತ್ರ’ ಎಂದರು ನವನೀತ್‌.

ಚಿತ್ರಕ್ಕೆ ಮೊದಲಿಗೆ ನಿರ್ಮಾಪಕರೊಬ್ಬರು ಹಣ ಹೂಡಲು ಮುಂದೆ ಬಂದಿದ್ದರಂತೆ. ಆದರೆ, ಆರು ತಿಂಗಳು ಕಳೆಯುವಷ್ಟರಲ್ಲಿ ಅವರು ಹಿಂದೆ ಸರಿದರು. ಕೊನೆಗೆ, ಚಿತ್ರ ತಂಡದ ಸದಸ್ಯರು ಹಾಗೂ ಆರ್‌ಜೆ ರೋಹಿತ್‌ ಗೆಳೆಯರು ಸೇರಿಕೊಂಡು ಚಿತ್ರವನ್ನು ಪೂರ್ಣಗೊಳಿಸಿದ್ದಾರಂತೆ. ಚಿತ್ರದ ನಾಯಕ ನಟ ರೋಹಿತ್ ಅವರೇ ಈ ಕುರಿತು ಹೇಳಿಕೊಂಡರು.

‘ಕರ್ವ’ ಚಿತ್ರ ಉತ್ತಮ ಪ್ರದರ್ಶನ ಕಂಡಿತು. ಅದರ ಮುಂದುವರಿದ ಭಾಗವೂ ಬರಲಿದೆ. ಸ್ನೇಹಿತರ ಪರಿಶ್ರಮವೇ ಬಕಾಸುರ ಎಂದ ಅವರ ಮಾತುಗಳಲ್ಲಿ ಚಿತ್ರ ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎನ್ನುವ ವಿಶ್ವಾಸವಿತ್ತು.

‘ಗಾಂಧಾರಿ’ ಧಾರಾವಾಹಿ ಖ್ಯಾತಿಯ ಕಾವ್ಯಾ ಗೌಡ ಈ ಚಿತ್ರದ ನಾಯಕಿ. ಇದು ಅವರ ಪ್ರಥಮ ಚಿತ್ರ. ‘ನಾನು ಕ್ಯಾಮೆರಾ ಮುಂದೆ ನಟನೆ ಮಾಡಬಲ್ಲೆ. ಆದರೆ, ಮೈಕ್‌ ಹಿಡಿದು ಮಾತನಾಡುವುದು ತುಸು ಕಷ್ಟ. ಚಿತ್ರದಲ್ಲಿ ಒಳ್ಳೆಯ ಪಾತ್ರ ಸಿಕ್ಕಿದೆ’ ಎಂದ ಅವರು ಪಾತ್ರದ ಗುಟ್ಟುಬಿಟ್ಟು ಕೊಡಲಿಲ್ಲ.

ಮೋಹನ್ ಅವರ ಛಾಯಾಗ್ರಹಣ ಇರುವ ಚಿತ್ರಕ್ಕೆ ಬಿ. ಅವಿನಾಶ್‌ ಸಂಗೀತ ಸಂಯೋಜಿಸಿದ್ದಾರೆ. ಸಾಧುಕೋಕಿಲ, ಶಶಿಕುಮಾರ್, ವಿಜಯ್‌ ಚೆಂಡೂರ್‌ ತಾರಾಗಣದಲ್ಲಿದ್ದಾರೆ. ಇದೇ ವೇಳೆ ಚಿತ್ರದ ಟೀಸರ್‌ ಅನ್ನು ಬಿಡುಗಡೆಗೊಳಿಸಲಾಯಿತು. ನಟ ಶ್ರೀಮುರಳಿ ಚಿತ್ರತಂಡಕ್ಕೆ ಶುಭ ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT