ಹುಮನಾಬಾದ್: ‘ಯುವ ಬ್ರಿಗೇಡ್ ಕಾರ್ಯಕರ್ತರ ಪರಿಸರ ಸಂರಕ್ಷಣೆ ಕಾರ್ಯ ಪ್ರಶಂಸನೀಯ’ ಎಂದು ಗಾಂಧಿವಾದಿ ಎಂ.ಆರ್.ಗಾದಾ ಹೇಳಿದರು.
ಇಲ್ಲಿಗೆ ಸಮೀಪದ ಮಾಣಿಕನಗರದ ಮಾಣಿಕ–ಸಂಗಮ ಕೆರೆಯಲ್ಲಿ ಯುವ ಬ್ರಿಗೇಡ್ ನಡೆಸಿದ ಸ್ವಚ್ಛತಾ ಅಭಿಯಾನ ಉದ್ಘಾಟಿಸಿ, ಮಾತನಾಡಿದ ಅವರು, ಇಂದಿನ ಯುವಕರು ವಿದ್ಯೆ ಕಲಿಯದೇ ದುಶ್ಚಟಗಳ ದಾಸರಾಗಿ ಭವಿಷ್ಯ ಹಾಳು ಮಾಡಿಕೊಳ್ಳುತ್ತಿರುವ ದಿನಗಳಲ್ಲಿ ಹುಮನಾಬಾದ್ ಯುವ ಬ್ರಿಗೇಡ್ ಪದಾಧಿಕಾರಿಗಳು ವಿದ್ಯೆ, ಸ್ವಯಂ ಉದ್ಯೋಗದ ಜತೆಗೆ ಸ್ವಯಂ ಪ್ರೇರಣೆಯಿಂದ ಜನೋಪಯೋಗಿ ಕಾರ್ಯ ದಲ್ಲಿ ತೊಡಗಿಸಿಕೊಂಡಿರುವುದು ಉತ್ತಮ ಬೆಳವಣೀಗೆ ಎಂದು ಹೇಳಿದರು.
ಇಂಥ ಯುವಕರಿಗೆ ಸಮಾಜ ಮತ್ತು ಪಾಲಕರು ಅಗತ್ಯ ನೆರವು ನೀಡಬೇಕು ಎಂದು ಸಲಹೆ ನೀಡಿದ ಬ್ರಿಗೇಡ್ ಕೈಗೊಳ್ಳುವ ಪ್ರತಿಯೊಂದು ಸಮಾಜ ಉಪಯೋಗಿ ಕೆಲಸಗಳಿಗೆ ನೆರವಿನ ಭರವಸೆ ನೀಡಿದರು.
ಯುವ ಬ್ರಿಗೇಡ್ ಜಿಲ್ಲಾ ಘಟಕ ಸಂಚಾಲಕ ಶ್ರೀಕಾಂತ ಕೊಳ್ಳೂರ ಮಾತನಾಡಿ, ‘ಹುಮನಾಬಾದ್ ಯುವ ಬ್ರಿಗೇಡ್ ಕಾರ್ಯ ಬೀದರ್ ಜಿಲ್ಲೆಗೆ ಮಾದರಿ ಆಗಿದೆ. ಯುವ ಶಕ್ತಿ ಮನಸ್ಸು ಮಾಡಿದರೆ ಸಮಾಜದ ಚಿತ್ರಣ ಬದಲಿಸಲು ಸಾಧ್ಯ. ನಿಸ್ವಾರ್ಥ ಜೀವನ ಜೊತೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ದೇಶದ ಋಣ ತೀರಿಸಬೇಕು’ ಎಂದು ಸಲಹೆ ನೀಡಿದರು.
ಬ್ರಿಗೇಡ್ ತಾಲ್ಲೂಕು ಘಟಕದ ಸಂಚಾಲಕ ಲಕ್ಷ್ಮಿಕಾಂತ ಹಿಂದೊಡ್ಡಿ ಮಾತನಾಡಿ, ‘ಕಳೆದ ವರ್ಷ ಕೇಂದ್ರ ಬಸ್ ನಿಲ್ದಾಣ ಪ್ರಾಂಗಣ ಸ್ವಯಂ ಪ್ರೇರಣೆಯಿಂದ ಸ್ವಚ್ಛಗೊಳಿಸಿದ್ದೇವು, ಈ ಬಾರಿ ಮಾಣಿಕ–ಸಂಗಮ ಕೆರೆ ಸ್ವಚ್ಛಗೊಳಿಸುತ್ತಿದ್ದೇವೆ. ಜಲ ಅಮೂಲ್ಯ ಇರುವ ಜಲ ಮೂಲವನ್ನು ಶುದ್ಧವಾಗಿಟ್ಟುಕೊಳ್ಳುವುದು ಎಲ್ಲರ ಕರ್ತವ್ಯ. ಕಾರಣ ಕೆರೆ, ಹಳ್ಳಗಳಲ್ಲಿ ಸಾರ್ವಜನಿಕರು ಯಾವುದೇ ಕಾರಣಕ್ಕೂ ತ್ಯಾಜ್ಯ ವಸ್ತುಗಳನ್ನು ಹಾಕಿ ಮಲೀನಗೊಳಿಸದೆ ಶುದ್ಧವಾಗಿಟ್ಟು ಕೊಳ್ಳಬೇಕು’ ಎಂದು ಮನವಿ ಮಾಡಿದರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಪ್ರಮುಖ ಪಂಡಿತ್ ಕ.ಬಾಳೂರೆ, ಮೋಹನ್ ಬಾರಡ್ ಯುವಕರನ್ನು ಸನ್ಮಾನಿಸಿದರು.
**
ಮಾಣಿಕ–ಸಂಗಮ ಕೆರೆ ಸ್ವಚ್ಛತೆ ಆರಂಭಿಸಿದ್ದೇವೆ. ಜಲಮೂಲ ಶುದ್ಧ ಹಾಗೂ ಸಂರಕ್ಷಣೆ ಕುರಿತು ಮುಂದಿನ ದಿನಗಳಲ್ಲಿ ಜನಜಾಗೃತಿ ಅಭಿಯಾನ ಗಹಮ್ಮಿಕೊಳ್ಳುತ್ತೇವೆ
– ಲಕ್ಷ್ಮಿಕಾಂತ ಹಿಂದೊಡ್ಡಿ ಯುವ ಬ್ರಿಗೇಡ್ ತಾಲ್ಲೂಕು ಸಂಚಾಲಕ