ಜಕಾರ್ತ: ಹಾಲಿ ಚಾಂಪಿಯನ್ನರು ಸೆಮಿಫೈನಲ್ನಲ್ಲಿ ನಿರಾಸೆ ಅನುಭವಿಸಿದರು. ಶುಕ್ರವಾರ ನಡೆದ ಪುರುಷರ ಸ್ಕ್ವಾಷ್ ತಂಡ ವಿಭಾಗದ ನಾಲ್ಕರ ಘಟ್ಟದ ಪಂದ್ಯದಲ್ಲಿ ಹಾಂಕಾಂಗ್ ಎದುರು 0–2ರಿಂದ ಸೋತ ಭಾರತ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿತು.
ಸೌರವ್ ಘೋಷಾಲ್ ಮತ್ತು ಹರಿಂದರ್ ಪಾಲ್ ಸಂಧು, ರಮಿತ್ ಟಂಡನ್ ಮತ್ತು ಮಹೇಶ್ ಮಾಂಗಾಂವ್ಕರ್ ಅವರನ್ನು ಒಳಗೊಂಡ ತಂಡಕ್ಕೆ ನಿರೀಕ್ಷಿತ ಸಾಮರ್ಥ್ಯ ತೋರಲು ಆಗಲಿಲ್ಲ. ಕಳೆದ ಬಾರಿ ಕಂಚು ಗೆದ್ದಿದ್ದ ಹಾಂಕಾಂಗ್ ತಂಡದ ಆಟಗಾರರು ಅಮೋಘ ಸಾಮರ್ಥ್ಯ ತೋರಿ ಫೈನಲ್ಗೆ ಪ್ರವೇಶಿಸಿದರು.
ಸೌರವ್ ಘೋಷಾಲ್ ಅವರು ಮ್ಯಾಕ್ಸ್ ಲೀ ಎದುರಿನ ಪಂದ್ಯದಲ್ಲಿ 0–3 (7–11, 9–11, 11–13)ರಿಂದ ಸೋತು ಆರಂಭದಲ್ಲೇ ನಿರಾಸೆ ಕಂಡರು. ನಂತರ ಹರಿಂದರ್ ಪಾಲ್ 1–3 (9–11, 11–9, 9–11, 3–11) ರಿಂದ ಲೀ ಆವ್ ಎದುರು ಸೋತರು. ಹೀಗಾಗಿ ತಂಡ ಒತ್ತಡಕ್ಕೆ ಒಳಗಾಯಿತು.