ತಿರುವನಂತಪುರ: ಕೇರಳ ಕೇಡರ್ನ ಹಿರಿಯ ಐಪಿಎಸ್ ಅಧಿಕಾರಿ ಎಡಿಜಿಪಿ ಸುದೇಶ್ ಕುಮಾರ್ ಅವರ ಸರ್ಕಾರಿ ಕಾರು ಚಾಲಕನ ಮೇಲೆ ಹಲ್ಲೆ ನಡೆಸಿದ್ದಕ್ಕಾಗಿ, ಅವರ ಪುತ್ರಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಜತೆಗೆ ಜಾಮೀನುರಹಿತ ಬಂಧನ ವಾರಂಟ್ ಹೊರಡಿಸಲಾಗಿದೆ.
ಸುದೇಶ್ ಕುಮಾರ್ ಪುತ್ರಿ ಪ್ರತಿಯಾಗಿ ನೀಡಿದ ದೂರು ಆಧರಿಸಿ ಕಾರು ಚಾಲಕ ಗವಾಸ್ಕರ್ ವಿರುದ್ಧ ಸಹ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಸುದೇಶ್ ಪುತ್ರಿ ಹಾಗೂ ಪತ್ನಿ ಬೆಳಗಿನ ವಾಯುವಿಹಾರದಿಂದ ಮರಳಲು ವಾಹನ ಒಯ್ಯುವುದು ತಡವಾಯಿತು. ಅದಕ್ಕಾಗಿ ಪುತ್ರಿ ನನ್ನನ್ನು ನಿಂದಿಸಿದರು. ಇದನ್ನು ನಿಲ್ಲಿಸುವಂತೆ ಕೋರಿದ್ದಕ್ಕಾಗಿ ಮೊಬೈಲ್ನಿಂದ ನನ್ನ ಕುತ್ತಿಗೆ ಹಾಗೂ ಭುಜದ ಮೇಲೆ ಹಲ್ಲೆ ಮಾಡಿದರು’ ಎಂದು ಗವಾಸ್ಕರ್ ದೂರಿನಲ್ಲಿ ಆರೋಪಿಸಿದ್ದಾರೆ.
ಡಿವೈಎಸ್ಪಿ ಶ್ರೇಣಿ ಅಧಿಕಾರಿಗಳು ಪ್ರಕರಣದ ತನಿಖೆ ನಡೆಸಲಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ವಿಶೇಷ ಸಶಸ್ತ್ರ ಪೊಲೀಸ್ (ಎಸ್ಎಪಿ) ಶಿಬಿರಕ್ಕೆ ನಿಯೋಜನೆಗೊಂಡಿರುವ ಗವಾಸ್ಕರ್ ಅವರು ಸುದೇಶ್ ಅವರ ಕಾರು ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.