ಹುಬ್ಬಳ್ಳಿ: ಸ್ಪರ್ಧೆಯ ಎರಡೂ ದಿನ ಉತ್ತಮ ಪ್ರದರ್ಶನ ನೀಡಿದ ಕರ್ನಾಟಕದ ಸೈಕ್ಲಿಸ್ಟ್ಗಳು ಮಹಾರಾಷ್ಟ್ರದ ಪುಣೆಯಲ್ಲಿ ನಡೆಯುತ್ತಿರುವ 15ನೇ ರಾಷ್ಟ್ರೀಯ ಮೌಂಟನ್ ಬೈಕ್ ಸೈಕ್ಲಿಂಗ್ ಚಾಂಪಿಯನ್ಷಿಪ್ನಲ್ಲಿ ಶನಿವಾರದ ಅಂತ್ಯಕ್ಕೆ ಒಟ್ಟು 15 ಪದಕಗಳನ್ನು ಜಯಿಸಿದ್ದಾರೆ.
14 ವರ್ಷದ ಒಳಗಿನವರ ಬಾಲಕರ ವಿಭಾಗದ 3 ಲ್ಯಾಪ್ ಮಾಸ್ಡ್ ಸ್ಟಾರ್ಟ್ ಸ್ಪರ್ಧೆಯಲ್ಲಿ ಮೈಸೂರಿನ ಚರಿತಗೌಡ 51 ನಿಮಿಷ 32 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದರು. ಇದೇ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಮೈಸೂರಿನ ಕರೆನಾ ಮಾರ್ಷಲ್ ಬೆಳ್ಳಿ ಪಡೆದರು. 2 ಲ್ಯಾಪ್ ವೈಯಕ್ತಿಕ ಟೈಮ್ ಟ್ರಯಲ್ಸ್ನಲ್ಲಿ ಕರೆನಾ 49 ನಿಮಿಷ 44 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಕಂಚಿನ ಪದಕಕ್ಕೆ ಕೊರಳೊಡ್ಡಿ ಡಬಲ್ ಗೌರವಕ್ಕೆ ಪಾತ್ರರಾದರು.
18 ವರ್ಷದ ಒಳಗಿನವರ 3 ಲ್ಯಾಪ್ ವೈಯಕ್ತಿಕ ಟೈಮ್ ಟ್ರಯಲ್ಸ್ನಲ್ಲಿ ಮೈಸೂರಿನ ವೈಶಾಖ 48 ನಿಮಿಷ 20 ಸೆಕೆಂಡ್ಗಳಲ್ಲಿ ಗುರಿ ಮುಟ್ಟಿ ಚಿನ್ನ ಜಯಿಸಿದರೆ, ಈ ವಿಭಾಗದ ಬೆಳ್ಳಿ ಮೈಸೂರಿನ ಕಮಲರಾಜ್ ಪಾಲಾಯಿತು. ಕಮಲರಾಜ್ 51 ನಿ. 11 ಸೆ. ಗಳಲ್ಲಿ ಗುರಿ ಮುಟ್ಟಿ ಈ ಸಾಧನೆ ಮಾಡಿದರು.
ಇದೇ ವಯೋಮಾನದ ಬಾಲಕಿಯರ ವಿಭಾಗದಲ್ಲಿ ವಿಜಯಪುರ ಕ್ರೀಡಾ ನಿಲಯದ ಸೌಮ್ಯಾ ಅಂತಾಪುರ ಬೆಳ್ಳಿ ಪಡೆದರೆ, ಜಮಖಂಡಿಯ ದಾನಮ್ಮ ಚಿಚಖಂಡಿ ಕಂಚು ತಮ್ಮದಾಗಿಸಿಕೊಂಡರು.
16 ವರ್ಷದ ಒಳಗಿನವರ ಬಾಲಕರ ವಿಭಾಗದ 3 ಲ್ಯಾಪ್ ಟೈಮ್ ಟ್ರಯಲ್ಸ್ನಲ್ಲಿ ಮೈಸೂರಿನ ಅಡೋನೀಸ್ ತೆಂಗಪು ಮತ್ತು ಹಸ್ಮುಖ ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಜಯಿಸಿದರು.
ಪುರುಷರ 4 ಲ್ಯಾಪ್ ವೈಯಕ್ತಿಕ ಟೈಮ್ ಟ್ರಯಲ್ಸ್ನಲ್ಲಿ ಬೆಂಗಳೂರಿನ ಕೆ. ಕಿರಣ್ ಕುಮಾರ ರಾಜು ಒಂದು ಗಂಟೆ 03.26 ಸೆಕೆಂಡ್ಗಳಲ್ಲಿ ಗುರಿ ಮುಟ್ಟಿ ಬೆಳ್ಳಿ ಪಡೆದರು. ಇದು ಈ ಬಾರಿಯ ಚಾಂಪಿಯನ್ಷಿಪ್ನಲ್ಲಿ ರಾಜ್ಯ ತಂಡದ ಖಾತೆ ಸೇರಿದ ಮೊದಲ ಪದಕ. ಮಹಿಳೆಯರ 3 ಲ್ಯಾಪ್ನ ವೈಯಕ್ತಿಕ ಟೈಮ್ ಟ್ರಯಲ್ಸ್ನಲ್ಲಿ ವಿಜಯಪುರ ಕ್ರೀಡಾನಿಲಯದ ಸೌಮ್ಯಾ ಅಂತಾಪುರ ಒಂದು ಗಂಟೆ 10 ನಿಮಿಷದಲ್ಲಿ ಗುರಿ ಮುಟ್ಟಿ ಬೆಳ್ಳಿ ಗೆದ್ದುಕೊಂಡರು.