ಬೆಂಗಳೂರು: ಮುಂದಿನ ವರ್ಷ ಭಾರತವು ಅಂತರರಾಷ್ಟ್ರೀಯ ಒಲಿಂಪಿಕ್ ಕಮಿಟಿಯ ಸಭೆಗೆ ಆತಿಥ್ಯ ವಹಿಸಲಿದೆ.
ಶನಿವಾರ ಐಒಸಿಯು ಈ ವಿಷಯವನ್ನು ಖಚಿತಪಡಿಸಿತು. 1983ರ ನಂತರ ಇದೇ ಮೊದಲ ಬಾರಿಗೆ ಭಾರತದಲ್ಲಿ ಈ ಸಭೆ ನಡೆಯಲಿದೆ. ಮುಂಬೈನಲ್ಲಿ ನೂತನವಾಗಿ ನಿರ್ಮಾಣವಾಗಿರುವ ಜಿಯೊ ವರ್ಲ್ಡ್ ಕನ್ವೆನ್ಷನ್ ಸೆಂಟರ್ನಲ್ಲಿ ಸಭೆಯನ್ನು ಆಯೋಜಿಸಲಾಗುತ್ತಿದೆ.
ಬೀಜಿಂಗ್ನಲ್ಲಿ ಈಚೆಗೆ ಸಭೆ ನಡೆದಿತ್ತು. 2023ರ ಸಮ್ಮೇಳನಕ್ಕಾಗಿ ವಿಶ್ವದ ವಿವಿಧ ನಗರಗಳು ಬಿಡ್ ಸಲ್ಲಿಸಿದ್ದವು. ಅದರಲ್ಲಿ ಮುಂಬೈಗೆ 76 ಮತಗಳ ಪೈಕಿ 75 ಲಭಿಸಿದವು.
ಐಒಸಿಯ ಸದಸ್ಯೆಯಾಗಿರುವ ಭಾರತದ ನೀತಾ ಅಂಬಾನಿ,ಭಾರತ ಒಲಿಂಪಿಕ್ ಸಮಿತಿ (ಐಒಸಿ) ಅಧ್ಯಕ್ಷ ಡಾ. ನರಿಂದರ್ ಬಾತ್ರಾ, ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಹಾಗೂ ಒಲಿಂಪಿಕ್ ಚಿನ್ನದ ಪದಕ ವಿಜೇತ ಶೂಟರ್ ಅಭಿನವ ಬಿಂದ್ರಾ ಅವರಿದ್ದ ನಿಯೋಗವು ಸಭೆಯಲ್ಲಿ ಭಾರತವನ್ನು ಪ್ರತಿನಿಧಿಸಿತ್ತು.
‘ಇದೊಂದು ಹಮ್ಮೆಯ ಕ್ಷಣವಾಗಿದೆ. ಭಾರತದ ಕ್ರೀಡಾ ಇತಿಹಾಸದಲ್ಲಿಯೇ ಮಹತ್ವದ ದಿನ ಇದು. ವಿಶ್ವದಲ್ಲಿಯೇ ಅತಿ ಹೆಚ್ಚು ಯುವಶಕ್ತಿಯನ್ನು ಹೊಂದಿರುವ ದೇಶ ನಮ್ಮದು. ಕ್ರೀಡೆಯಲ್ಲಿ ಅತ್ಯುನ್ನತ ಸಾಧನೆ ಮಾಡಲು ಮತ್ತು ಒಲಿಂಪಿಕ್ ಕ್ರೀಡೆಗಳತ್ತ ಯುವಕರನ್ನು ಆಕರ್ಷಿಸಿ ಪ್ರೋತ್ಸಾಹ ನೀಡಲು ಇದರಿಂದ ಸಾಧ್ಯವಾಗಲಿದೆ. ಐಒಸಿಗೆ ಧನ್ಯವಾದಗಳು’ ಎಂದು ನೀತಾ ಅಂಬಾನಿ ಸಂತಸ ವ್ಯಕ್ತಪಡಿಸಿದ್ದಾರೆ.