ಬೆಂಗಳೂರು: ಸ್ಪ್ರಿಂಟರ್ಗಳಾದ ಕರ್ನಾಟಕದ ಅಭಿನ್ ದೇವಾಡಿಗ ಮತ್ತು ಸರ್ವಿಸಸ್ ತಂಡ ಪ್ರತಿನಿಧಿಸುವ ಅಮ್ಲಾನ್ ಬೊರ್ಗೊಹೈನ್ ಅವರುಶನಿವಾರದಿಂದ ಇಲ್ಲಿ ನಡೆಯಲಿರುವ61ನೇ ರಾಷ್ಟ್ರೀಯ ಓಪನ್ ಅಥ್ಲೆಟಿಕ್ ಚಾಂಪಿಯನ್ಷಿಪ್ನಲ್ಲಿ ಸ್ಪರ್ಧಿಸಲಿದ್ದು, ಪ್ರಮುಖ ಆಕರ್ಷಣೆ ಎನಿಸಿದ್ದಾರೆ.
ಇತ್ತೀಚೆಗೆ ಗುಜರಾತ್ನಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಇತ್ತೀಚೆಗೆ 200 ಮೀ. ಓಟದಲ್ಲಿ ಬೆಳ್ಳಿ ಪದಕ ಜಯಿಸಿರುವ ಅಭಿನ್ ದೇವಾಡಿಗ ಉತ್ತಮ ಲಯದಲ್ಲಿದ್ದಾರೆ.
ಹರ್ಡಲ್ಸ್ ಪಟು ಜ್ಯೋತಿ ಯರಾಜಿ ಕೂಡ ಪ್ರಮುಖ ಅಥ್ಲೀಟ್ ಎನಿಸಿದ್ದಾರೆ.ಜ್ಯೋತಿ ಅವರು ರೈಲ್ವೇಸ್ ಪರ ಕಣಕ್ಕಿಳಿಯುವರು.
ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಅಮ್ಲಾನ್ ಮತ್ತು ಜ್ಯೋತಿ ತಲಾ ಎರಡು ಚಿನ್ನದ ಪದಕ ಗೆದ್ದುಕೊಂಡಿದ್ದರು. ಅಮ್ಲಾನ್ 100 ಮತ್ತು 200 ಮೀಟರ್ಸ್ ಓಟಗಳಲ್ಲಿ ಸ್ಪರ್ಧಿಸಲಿದ್ದರೆ, ಜ್ಯೋತಿ 100 ಮೀ. ಓಟ ಮತ್ತು ಹರ್ಡಲ್ಸ್ನಲ್ಲಿ ಅದೃಷ್ಟ ಪರೀಕ್ಷಿಸಲಿದ್ದಾರೆ.
ಜಾವೆಲಿನ್ ಪಟು ಡಿ.ಪಿ. ಮನು ಕೂಡ ಪ್ರಮುಖ ಸ್ಪರ್ಧಿಯಾಗಿದ್ದಾರೆ.
ಲಾಂಗ್ಜಂಪ್ ಪಟುಗಳಾದ ಮುರಳಿ ಶ್ರೀಶಂಕರ್, ಮುಹಮ್ಮದ್ ಅನೀಸ್ ಯಾಹ್ಯಾ, ಸ್ಟೀಪಲ್ಚೇಸರ್ ಅವಿನಾಶ್ ಸಬ್ಳೆ, ಟ್ರಿಪಲ್ ಜಂಪ್ ಸ್ಪರ್ಧಿಗಳಾದ ಎಲ್ದೋಸ್ ಪಾಲ್ ಮತ್ತು ಅಬ್ದುಲ್ಲಾ ಅಬೂಬಕರ್ ವಿವಿಧ ಕಾರಣಗಳಿಗಾಗಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ.
31 ತಂಡಗಳ ಒಟ್ಟು 868 ಅಥ್ಲೀಟ್ ಗಳು ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ.
ಕರ್ನಾಟಕದ ಯುವ ಅಥ್ಲೀಟ್ ಗಳಾದ ಚೇತನ್ ಮತ್ತು ಎನ್.ಎಸ್.ಸಿಮಿ ಅವರು ತಮ್ಮ ಸಾಮರ್ಥ್ಯ ತೋರಲು ಸಜ್ಜಾಗಿದ್ದಾರೆ. ನಾಲ್ಕು ದಿನಗಳಲ್ಲಿ ಪುರುಷ ಹಾಗೂ ಮಹಿಳೆಯರ ವಿಭಾ ಗಗಳಲ್ಲಿ 47 ಸ್ಪರ್ಧೆಗಳು ನಡೆಯಲಿವೆ.
ಪ್ಯಾರಿಸ್ ಒಲಿಂಪಿಕ್ಸ್ ಮತ್ತು ಏಷ್ಯನ್ ಗೇಮ್ಸ್ಗೆ ಭಾರತ ತಂಡದ ಪೂರ್ವಸಿದ್ಧತಾ ಶಿಬಿರಕ್ಕೆ ಆಯ್ಕೆ ಟ್ರಯಲ್ಸ್ ಆಗಿಯೂ ಈ ಚಾಂಪಿಯನ್ಷಿಪ್ಅನ್ನು ಪರಿಗಣಿಸಲಾಗುತ್ತದೆ.