ಬೆಂಗಳೂರು: 2018ರ ವಿಶ್ವಕಪ್ ಸೇರಿ ಪ್ರಮುಖ ಟೂರ್ನಿಗಳಲ್ಲಿ ಆಡಿದ ಅನುಭವ ಒಲಿಂಪಿಕ್ಸ್ನಲ್ಲಿ ಉಪಯೋಗಕ್ಕೆ ಬರಲಿದೆ ಎಂದು ಭಾರತ ಹಾಕಿ ತಂಡದ ಮಿಡ್ಫೀಲ್ಡರ್ ನೀಲಕಂಠ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.
‘ನಾನು ಮೂರು ವರ್ಷಗಳಿಂದ ರಾಷ್ಟ್ರೀಯ ತಂಡದ ಭಾಗವಾಗಿದ್ದೇನೆ. 2018ರ ವಿಶ್ವಕಪ್ ಹಾಗೂ ಒಲಿಂಪಿಕ್ ಕ್ವಾಲಿಫೈಯರ್ಸ್ ಆಡಿದ್ದು ನನ್ನ ಅದೃಷ್ಟ. ತಂಡದಲ್ಲಿ ನನ್ನ ಪಾತ್ರವೇನು ಎಂಬುದನ್ನು ಈ ಟೂರ್ನಿಗಳಿಂದ ತಿಳಿದುಕೊಂಡೆ’ ಎಂದು ಅವರು ನುಡಿದರು.
‘ನಾಯಕ ಮನ್ಪ್ರೀತ್ ಸಿಂಗ್ ಅವರು ಎಲ್ಲ ಆಟಗಾರರಲ್ಲಿ ಉತ್ಸಾಹ ತುಂಬುತ್ತಾರೆ. ಮಿಡ್ಫೀಲ್ಡ್ ವಿಭಾಗದಲ್ಲಿ ಹಾರ್ದಿಕ್ ಸಿಂಗ್ ಅವರು ಉತ್ತಮ ನೆರವು ನೀಡುತ್ತಾರೆ’ ಎಂದು ಅವರು ಹೇಳಿದರು.
25ರ ಹರಯದ ಮಣಿಪುರದ ನೀಲಕಂಠ ಅವರು, ಕೋವಿಡ್–19 ಪಿಡುಗಿನ ಹಿನ್ನೆಲೆಯಲ್ಲಿ ವಿಧಿಸಲಾಗಿರುವ ಲಾಕ್ಡೌನ್ ಮಧ್ಯೆಯೂ ಮನೆಯಲ್ಲೇ ಕೆಲವು ಚಟುವಟಿಕೆಗಳ ಮೂಲಕ ಫಿಟ್ನೆಟ್ ಕಾಯ್ದುಕೊಂಡಿರುವುದಾಗಿ ನುಡಿದರು.