ರಾಂಚಿ: ಬಹುಕೋಟಿ ಮೇವು ಹಗರಣ ಸಂಬಂಧ ಜೈಲು ಬಂಧಿಯಾಗಿರುವ ಆರ್ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರಿಗೆ ಮೇ 12ರವರೆಗೆ ಐದು ದಿನಗಳ ಕಾಲ ಪೆರೋಲ್ ದೊರೆತಿದೆ.
ಪಾಟ್ನದಲ್ಲಿ ಮೇ10 ರಿಂದ 14ರವರೆಗೆ ನೆರವೇರಲಿರುವ ಹಿರಿಯ ಮಗ ತೇಜ್ ಪ್ರತಾಪ್ ಮದುವೆಯಲ್ಲಿ ಭಾಗವಹಿಸಲು ಅವಕಾಶ ನೀಡಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದರು.
ಲಾಲೂ ಅವರು ಸಕ್ಕರೆ ಕಾಯಿಲೆ ಹಾಗೂ ಕಿಡ್ನಿ ಸಂಬಂಧಿ ಸಮಸ್ಯೆ ಕಾರಣ ರಾಂಚಿಯಲ್ಲಿರುವ ರಾಜೇಂದ್ರ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಜೈಲು ಆಡಳಿತಾಧಿಕಾರಿಗಳು ಮತ್ತು ಗೃಹ ಇಲಾಖೆಯ ಸಮಾಲೋಚನೆ ಬಳಿಕ ಪೆರೋಲ್ಗೆ ಅನುಮತಿ ದೊರೆತಿದ್ದು, ಬುಧವಾರ ರಾಂಚಿಯಿಂದ ಪಾಟ್ನಾಕ್ಕೆ ವಿಮಾನದಲ್ಲಿ ತೆರಳಲಿದ್ದಾರೆ ಎಂದು ಆರ್ಜೆಡಿ ನಾಯಕ ಭೋಲಾ ಯಾದವ್ ತಿಳಿಸಿದ್ದಾರೆ.
ಲಾಲೂ ಪ್ರಸಾದ್ ಯಾದವ್ ಮಗ ತೇಜ್ ಪ್ರತಾಪ್ ಬಿಹಾರದ ಮಾಜಿ ಮುಖ್ಯಮಂತ್ರಿ ದರೋಗ ಪ್ರಸಾದ್ ರಾಯ್ ಅವರ ಮೊಮ್ಮಗಳಾದ ಐಶ್ವರ್ಯ ರಾಯ್ ಅವರನ್ನು ವಿವಾಹವಾಗಲಿದ್ದಾರೆ.