ಬೆಂಗಳೂರು: ‘ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ (ಬಿಡಿಎ) ನನ್ನ ಹೆಸರಿಗೆ ಮಂಜೂರಾಗಿದ್ದ ನಿವೇಶನಕ್ಕೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಬೇರೊಬ್ಬರಿಗೆ ವರ್ಗಾವಣೆ ಮಾಡಲಾಗಿದೆ’ ಎಂದು ಸ್ವಾತಂತ್ರ್ಯ ಹೋರಾಟಗಾರ ಇಂದ್ರಜಿತ್ ದೂರಿದ್ದಾರೆ.
ಆ ಸಂಬಂಧ ಬಿಡಿಎ ಅಧಿಕಾರಿಗಳಿಗೆ ಮನವಿ ಸಲ್ಲಿಸಿರುವ ಅವರು, ‘₹20 ಕೋಟಿ ಮೌಲ್ಯದ ನಿವೇಶನವನ್ನು ಮಹಿಳೆಯೊಬ್ಬರಿಗೆ ವರ್ಗಾಯಿಸಿ, ಅವರಿಗೇ ಕ್ರಯಪತ್ರ ನೀಡಲಾಗಿದೆ. ಈ ವಂಚನೆಯಲ್ಲಿ ಕೆಲ ಬಿಡಿಎ ಅಧಿಕಾರಿಗಳು ಶಾಮೀಲಾಗಿದ್ದಾರೆ. ತನಿಖೆ ನಡೆಸಿ ನನ್ನ ನಿವೇಶನ ವಾಪಸ್ ಕೊಡಿಸಬೇಕು’ ಎಂದು ಒತ್ತಾಯಿಸಿದ್ದಾರೆ.
‘ಕಾಲ್ನಡಿಗೆ ಮೂಲಕ ಹಲವು ದೇಶಗಳನ್ನು ಸುತ್ತಾಡಿದ್ದೇನೆ. 5.89 ಲಕ್ಷ ಕಿ.ಮೀನಷ್ಟು ಕಾಲ್ನಡಿಗೆಯಲ್ಲಿ ಹೋಗಿ ದೇಶಕ್ಕೆ ಕೀರ್ತಿ ತಂದಿದ್ದೇನೆ. ಅದಕ್ಕಾಗಿ ಹಲವು ಪ್ರಶಸ್ತಿಗಳು ಬಂದಿವೆ. 1980ರ ಏಪ್ರಿಲ್ 14ರಂದು ಬೆಂಗಳೂರಿನ ಆರ್.ಪಿ.ಸಿ ಬಡಾವಣೆಯಲ್ಲಿ 90x40 ಅಳತೆಯ ನಿವೇಶನವನ್ನು ಬಿಡಿಎ ನನಗೆ ನೀಡಿತ್ತು. ₹25 ಸಾವಿರ ಕೊಟ್ಟು ಸ್ವಾಧೀನ ಪತ್ರ ಪಡೆದಿದ್ದೆ’.
‘ಬಳಿಕ, ವಿಶ್ವ ಶಾಂತಿಗಾಗಿ ವಿಶ್ವ ಪರ್ಯಟನೆಗೆ ಹೋಗಿದ್ದೆ. ಅದೇ ವೇಳೆಯಲ್ಲೇ ಜಿಪಿಎ ಸೇರಿದಂತೆ ಹಲವು ನಕಲಿ ದಾಖಲೆಗಳನ್ನು ಸೃಷ್ಟಿಸಿ ನಿವೇಶನವನ್ನು ಮಹಿಳೆಗೆ ವರ್ಗಾಯಿಸಲಾಗಿದೆ’ ಎಂದು ಇಂದ್ರಜಿತ್ ತಿಳಿಸಿದ್ದಾರೆ.
‘ಈಗ ನಾನು, ಈ ನಿವೇಶನವನ್ನು ಧರ್ಮಸ್ಥಳದ ಮಂಜುನಾಥ ಟ್ರಸ್ಟ್ಗೆ ನೀಡಲು ತೀರ್ಮಾನಿಸಿದ್ದೇನೆ. ಈ ಅನ್ಯಾಯ ಸರಿಪಡಿಸಿ ನನ್ನ ಹೆಸರಿಗೆ ಕ್ರಯಪತ್ರ ಮಾಡಿಸಿಕೊಡಬೇಕು. ಅದನ್ನೇ ಟ್ರಸ್ಟ್ ಹೆಸರಿಗೆ ವರ್ಗಾಯಿಸ ಲಿದ್ದೇನೆ’ ಎಂದು ಅವರು ವಿವರಿಸಿದ್ದಾರೆ.