ಬೆಂಗಳೂರು: ಅತ್ಯುತ್ತಮ ಆಟವಾಡಿದ ಆತಿಥೇಯ ಕರ್ನಾಟಕ ವೃತ್ತ ತಂಡವು ಅಖಿಲ ಭಾರತ ಪೋಸ್ಟಲ್ (ಅಂಚೆ ಇಲಾಲೆ) ವಾಲಿವಾಲ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು.
ಕಂಠೀರವ ಕ್ರೀಡಾಂಗಣದಲ್ಲಿ ಶುಕ್ರವಾರ ಕೊನೆಗೊಂಡ ಟೂರ್ನಿಯ ಫೈನಲ್ ಹಣಾಹಣಿಯಲ್ಲಿ ಕರ್ನಾಟಕ ತಂಡದವರು25-20, 25-21, 25-15ರಿಂದ ಕಳೆದ ಬಾರಿಯ ಚಾಂಪಿಯನ್ ಹಿಮಾಚಲ ಪ್ರದೇಶ ತಂಡಕ್ಕೆ ಸೋಲುಣಿಸಿದರು. ಆ ಮೂಲಕ 2019ರ ಫೈನಲ್ನಲ್ಲಿ ಅನುಭವಿಸಿದ್ದ ಸೋಲಿಗೆ ಮುಯ್ಯಿ ತೀರಿಸಿಕೊಂಡರು.
‘ಬೆಸ್ಟ್ ಆಫ್ ಫೈವ್‘ ಸೆಟ್ಗಳ ಮಾದರಿಯ ಪಂದ್ಯಗಳ ಪ್ರಶಸ್ತಿ ಸುತ್ತಿನಲ್ಲಿ ಆತಿಥೇಯ ಆಟಗಾರರು ಎದುರಾಳಿ ತಂಡದ ವಿರುದ್ಧ ಚಾಕಚಕ್ಯತೆಯ ಆಟದ ಮೂಲಕ ಗಮನಸೆಳೆದರು. 70 ನಿಮಿಷಗಳಲ್ಲಿ ಮೂರು ಸೆಟ್ ಗೆದ್ದು ಟ್ರೋಫಿಗೆ ಮುತ್ತಿಕ್ಕಿದರು.
ಇದಕ್ಕೂ ಮೊದಲು ನಡೆದ ಸೆಮಿಫೈನಲ್ ಸೆಣಸಾಟಗಳಲ್ಲಿ ಕರ್ನಾಟಕ25-16, 25-17, 25-18ರಿಂದ ಪಶ್ಚಿಮ ಬಂಗಾಳ ತಂಡವನ್ನು ಪರಾಭವಗೊಳಿಸಿದರೆ, ಹಿಮಾಚಲ ಪ್ರದೇಶ25-21, 18-25,25-23,25-18ರಿಂದ ಕೇರಳ ತಂಡಕ್ಕೆ ಸೋಲುಣಿಸಿತ್ತು.
ಪಶ್ಚಿಮ ಬಂಗಾಳ ತಂಡವು ಕೇರಳವನ್ನು ಮಣಿಸಿ ಮೂರನೇ ಸ್ಥಾನ ಗಳಿಸಿತು.