ಸೋನೆಪತ್: ಪವನ್ ಶೆಹ್ರವತ್ ಮತ್ತು ಕಾಶಿಲಿಂಗ ಅಡಕೆ ಅವರ ಅಮೋಘ ಆಟದ ನೆರವಿನಿಂದ ಬೆಂಗಳೂರು ಬುಲ್ಸ್ ತಂಡ ಪ್ರೊ ಕಬಡ್ಡಿ ಲೀಗ್ನಲ್ಲಿ ಬುಧವಾರ ಜಯಭೇರಿ ಮೊಳಗಿಸಿತು. ಇಲ್ಲಿನ ಮೋತಿಲಾಲ್ ನೆಹರೂ ಕ್ರೀಡಾಶಾಲೆಯ ಅಂಗಣದಲ್ಲಿ ನಡೆದ ಪಂದ್ಯದಲ್ಲಿ ಈ ತಂಡ ತಮಿಳ್ ತಲೈವಾಸ್ ಎದುರು 44–35ರಿಂದ ಗೆದ್ದಿತು.
ಎದುರಾಳಿ ಪಾಳಯದಲ್ಲಿ ಸಂಚಲನ ಸೃಷ್ಟಿಸಿದ ಪವನ್ 16 ಪಾಯಿಂಟ್ಗಳೊಂದಿಗೆ ಮಿಂಚಿದರು. ಕಾಶಿಲಿಂಗ 12 ಪಾಯಿಂಟ್ ಗಳಿಸಿ ತಂಡಕ್ಕೆ ಉತ್ತಮ ಕಾಣಿಕೆ ನೀಡಿದರು. ಆಶಿಶ್ ಸಾಂಗ್ವಾನ್ ಮತ್ತು ಮಹೇಂದರ್ ಸಿಂಗ್ ತಲಾ ನಾಲ್ಕು ಮತ್ತು ಮೂರು ಪಾಯಿಂಟ್ ಗಳಿಸಿ ಮಿಂಚಿದರು.
ತಲೈವಾಸ್ ಪರವಾಗಿ ನಾಯಕ ಅಜಯ್ ಠಾಕೂರ್ ಒಬ್ಬರೇ ಮಿಂಚಿದರು. ಅವರು ಒಂಬತ್ತು ಪಾಯಿಂಟ್ ಗಳಿಸಿದರು. ತವರಿನಲ್ಲಿ ಏಕೈಕ ಪಂದ್ಯ ಗೆದ್ದು ಇಲ್ಲಿಗೆ ಬಂದಿದ್ದ ತಲೈವಾಸ್ ಈ ಸೋಲಿನೊಂದಿಗೆ ಆರು ಪಂದ್ಯಗಳಲ್ಲಿ ಐದನ್ನು ಸೋತಂತಾಯಿತು.
ಬುಲ್ಸ್ ಆಡಿದ ಎರಡೂ ಪಂದ್ಯಗಳನ್ನು ಗೆದ್ದು ಬಿ ವಲಯದ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನ ಗಳಿಸಿತು.