ಪುಣೆ: ಮಣೀಂದರ್ ಸಿಂಗ್ ಅವರು ದ್ವಿತೀಯಾರ್ಧದಲ್ಲಿ ತೋರಿದ ಅಮೋಘ ಆಟದ ನೆರವಿನಿಂದಬೆಂಗಾಲ್ ವಾರಿಯರ್ಸ್ ತಂಡ ಪ್ರೊ ಕಬಡ್ಡಿ ಲೀಗ್ನಲ್ಲಿ ಯು.ಪಿ.ಯೋಧಾಸ್ ವಿರುದ್ದದ ಪಂದ್ಯವನ್ನು ‘ಟೈ’ ಮಾಡಿಕೊಂಡಿತು.
ಬಾಳೇವಾಡಿಯ ಶಿವಛತ್ರಪತಿ ಕ್ರೀಡಾ ಸಂಕೀರ್ಣದಲ್ಲಿ ಮಂಗಳವಾರ ನಡೆದ ಹಣಾಹಣಿ 41–41 ರಲ್ಲಿ ಸಮಬಲದಲ್ಲಿ ಕೊನೆಗೊಂಡಿತು.
ರೋಹಿತ್ ತೋಮರ್ (16) ಮತ್ತು ಪ್ರದೀಪ್ ನರ್ವಾಲ್ (11) ಅವರ ಚುರುಕಿನ ರೇಡಿಂಗ್ ನೆರವಿನಿಂದ ಪ್ರಥಮಾರ್ಥದಲ್ಲಿ ಯೋಧಾಸ್ ತಂಡ 25–15 ರಲ್ಲಿ ಮುನ್ನಡೆ ಸಾಧಿಸಿ, ಸುಲಭ ಗೆಲುವಿನ ನಿರೀಕ್ಷೆಯಲ್ಲಿತ್ತು. ಆದರೆ ವಿರಾಮದ ಬಳಿಕ ಮಣೀಂದರ್, (18 ಪಾಯಿಂಟ್ಸ್) ಪಂದ್ಯದ ಗತಿಯನ್ನೇ ಬದಲಾಯಿಸಿದರು.
ಆಟದ ಆರಂಭದಲ್ಲಿ ಮೇಲುಗೈ ಸಾಧಿಸಿದ ಯೋಧಾಸ್ 4–0 ರಲ್ಲಿ ಮುನ್ನಡೆ ಪಡೆಯಿತು. ಐದನೇ ನಿಮಿಷದಲ್ಲಿ ಎದುರಾಳಿ ತಂಡವನ್ನು ಆಲೌಟ್ ಮಾಡಿ ಮುನ್ನಡೆಯನ್ನು 9–3ಕ್ಕೆ ಹೆಚ್ಚಿಸಿಕೊಂಡಿತು.
12ನೇ ನಿಮಿಷದಲ್ಲಿ ಮತ್ತೊಮ್ಮೆ ವಾರಿಯರ್ಸ್ ತಂಡವನ್ನು ಆಲೌಟ್ ಮಾಡಿ 20–7 ರಲ್ಲಿ ಮೇಲುಗೈ ಸಾಧಿಸಿತು. 10 ಪಾಯಿಂಟ್ಗಳ ಮುನ್ನಡೆಯೊಂದಿಗೆ ವಿರಾಮಕ್ಕೆ ತೆರಳಿತು.
ಆದರೆ ಎರಡನೇ ಅವಧಿಯಲ್ಲಿ ಪಂದ್ಯದ ಮೇಲೆ ಹಿಡಿತ ಬಿಗಿಗೊಳಿಸಿದ ವಾರಿಯರ್ಸ್ ತಂಡದವರು, ಹಿನ್ನಡೆಯ ಅಂತರ ತಗ್ಗಿಸುತ್ತಾ ಸಾಗಿದರು. ಯೋಧಾಸ್ ತಂಡವನ್ನು ಆಲೌಟ್ ಮಾಡಿ ಹಿನ್ನಡೆಯನ್ನು 33–34ಕ್ಕೆ ಕಡಿಮೆಗೊಳಿಸಿದರು.
ಕೊನೆಯ ನಿಮಿಷಗಳಲ್ಲಿ ಉಭಯ ತಂಡಗಳು ಜಿದ್ದಾಜಿದ್ದಿನ ಹೋರಾಟ ನಡೆಸಿದ್ದರಿಂದ ಪಂದ್ಯ ರೋಚಕ ಟೈನಲ್ಲಿ ಕೊನೆಗೊಂಡಿತು.
ದಿನದ ಎರಡನೇ ಪಂದ್ಯದಲ್ಲಿ ದಬಾಂಗ್ ಡೆಲ್ಲಿ 40–33 ರಲ್ಲಿ ತೆಲುಗು ಟೈಟನ್ಸ್ ತಂಡವನ್ನು ಸೋಲಿಸಿತು.